ಮಂಗಳೂರು, ಮಾರ್ಚ್ 1: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಕೆಂಪು ಕೋಟೆ ಮತ್ತು ಭಗವಧ್ವಜ ಹೇಳಿಕೆ ವಿಧಾನ ಮಂಡಲದ ಅಧಿವೇಶನವನ್ನೇ ಆಪೋಸನ ತೆಗೆದುಕೊಂಡಿತ್ತು. ಈಗ ಬಿಜೆಪಿಯ ಇನ್ನೋರ್ವ ಶಾಸಕ ಈ ವಿಚಾರದಲ್ಲಿ ವಿವಾದೀತ ಹೇಳಿಕೆಯನ್ನು ನೀಡಿದ್ದಾರೆ.
ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತುಳುವಿನಲ್ಲಿ ಮಾಡಿದ ಭಾಷಣದ ತುಣುಕುಗಳು ಈಗ ವೈರಲ್ ಆಗಿವೆ.
“ಕಾಂಗ್ರೆಸ್ ನಾಯಕರ ಷಡ್ಯಂತ್ರದಿಂದ ಹಿಂದೂ ಕಾರ್ಯಕರ್ತನೊಬ್ಬನ ಹತ್ಯೆಯಾಗಿದೆ. ಕಾಂಗ್ರೆಸ್ಸಿನ ಕುಮ್ಮುಕ್ಕಿನಿಂದಲೇ ಈ ಕೊಲೆ ನಡೆದಿದೆ ಎಂದು ನಾನು ನೇರವಾಗಿ ಆರೋಪವನ್ನು ಮಾಡುತ್ತೇನೆ”ಎಂದು ಹರೀಶ್ ಪೂಂಜಾ ಆರೋಪಿಸಿದರು.
“ಹಿಂದೂ ಸಮಾಜದ ರಕ್ಷಣೆಗೋಸ್ಕರ ಹರ್ಷನಂತಹ ಕೋಟ್ಯಂತರ ಜನ ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬಂದು ಸಮಾಜಘಾತಕ ಶಕ್ತಿಗಳ ವಿರುದ್ದ ಹೋರಾಡುತ್ತಾರೆ. ಈಶ್ವರಪ್ಪನವರ ಹೇಳಿಕೆಯಿಂದಾಗಿ ಅಧಿವೇಶನವನ್ನು ಮೊಟಕುಗೊಳಿಸಲಾಯಿತು”ಎಂದು ಹರೀಶ್ ಪೂಂಜಾ ಹೇಳಿದರು.
“ಕೆಂಪು ಕೋಟೆಯಲ್ಲಿ ಭಗವಧ್ವಜವನ್ನು ಹಿಂದೂ ಸಮಾಜ ಹಾರಿಸಿಯೇ ತೀರುತ್ತದೆ, ಆದರೆ ಅದು ರಾಷ್ಟ್ರಧ್ವಜದ ಕೆಳಗೆ ಭಗವಧ್ವಜವನ್ನು ಹಾರಿಸುತ್ತೇವೆ. ಇದನ್ನು ತಪ್ಪಿಸಲು ಯಾವ ಪಕ್ಷಕ್ಕೂ ಸಾಧ್ಯವಿಲ್ಲ, ಬಿಜೆಪಿ ಆ ಕೆಲಸವನ್ನು ಮಾಡುತ್ತದೆ”ಎಂದು ಹರೀಶ್ ಪೂಂಜಾ ವಿವಾದಕಾರೀ ಹೇಳಿಕೆಯನ್ನು ನೀಡಿದ್ದಾರೆ.
“ಭಗವಧ್ವಜ ಇಂದು ನಿನ್ನೆಯದಲ್ಲ, ಈ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕಾದರೆ ಬಾಲಗಂಗಾಧರ ತಿಲಕ್ ಅವರು ಭಗವಧ್ವಜವನ್ನು ಮುಂದಿಟ್ಟು ಕೊಂಡು ಹೋರಾಡಿದರು. ಶಿವಾಜಿಯ ಮತ್ತು ಅರ್ಜುನನ ರಥದಲ್ಲೂ ಭಗವಧ್ವಜವಿತ್ತು”ಎಂದು ಶಾಸಕ ಹರೀಶ್ ಪೂಂಜಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು
[t4b-ticker]
+ There are no comments
Add yours