ಚಿತ್ರದುರ್ಗ,ಜನವರಿ10:
ಕೋವಿಡ್ ಲಸಿಕೆಯ ಮೂರನೇ (ಬೂಸ್ಟರ್) ಡೋಸ್ ವಿತರಣೆಗೆ ಸೋಮವಾರ ಚಿತ್ರದುರ್ಗ ತಹಶೀಲ್ದಾರ್ ಸತ್ಯನಾರಾಯಣ ಚಾಲನೆ ನೀಡಿದರು.
ಇಲ್ಲಿನ ಬುದ್ಧನಗರದ ನಗರ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಎರಡನೇ ಡೋಸ್ ಪಡೆದು 9 ತಿಂಗಳು ಕಳೆದ 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವವರಿಗೆ, ಆರೋಗ್ಯ ಕಾರ್ಯಕರ್ತರಿಗೆ ಹಾಗೂ ವಿವಿಧ ಇಲಾಖೆಗಳ ಮುಂಚೂಣಿ ಕಾರ್ಯಕರ್ತರಿಗೆ ಮೂರನೇ ಡೋಸ್ ಲಸಿಕೆಯನ್ನು ಮುನ್ನಚ್ಚರಿಕೆ ಲಸಿಕೆಯಾಗಿ ನೀಡಲಾಯಿತು.
ಬೂಸ್ಟ್ರ್ ಡೋಸ್ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್ ಸತ್ಯನಾರಾಯಣ, ಚಿತ್ರದುರ್ಗ ತಾಲ್ಲೂಕಿನಲ್ಲಿ ಕೋವಿಡ್ ಮೂರನೇ ಡೋಸ್ ನೀಡಲು ಸರ್ಕಾರದ ಆದೇಶದಂತೆ ಇಂದಿನಿಂದ ಪ್ರಾರಂಭವಾಗಿದ್ದು, ಎಲ್ಲ ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದು ಕೋವಿಡ್ನಿಂದ ರಕ್ಷಣೆ ಪಡೆದುಕೊಳ್ಳಿ ಎಂದು ಹೇಳಿದರು.
ಎರಡನೇ ಡೋಸ್ ಪಡೆದು ಒಂಭತ್ತು ತಿಂಗಳು ಪೂರೈಸಿದ ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಹಾಗೂ ಅನಾರೋಗ್ಯ ಹೊಂದಿರುವ 60 ವರ್ಷ ಮೇಲ್ಟಟ್ಟವರಿಗೆ ಮೂರನೇ ಡೋಸ್ ಲಸಿಕೆ ವಿತರಿಸಲಾಗುತ್ತಿದೆ. ಅರ್ಹರೆಲ್ಲರೂ ಲಸಿಕೆ ಪಡೆಯಬೇಕು ಎಂದು ಹೇಳಿದರು.
ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ತಾಲ್ಲೂಕಿನಲ್ಲಿ ಮೂರನೇ ಮುನ್ನೆಚ್ಚರಿಕೆ ಲಸಿಕೆಯ ಗುರಿ 5045 ಜನವರಿಗೆ ಲಸಿಕೆ ನೀಡಬೇಕಾಗಿದ್ದು, ತಾಲ್ಲೂಕಿನಾದ್ಯಂತ 22 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ ಲಸಿಕೆ ನೀಡಲಾಗುತ್ತಿದೆ ಎಂದರು.
ಸಾಮಾಜಿಕ ಅಂತರ ಕಾಯ್ದುಕೊಂಡು, ಕೋವಿಡ್ ನಿಯಮಗಳನ್ನು ಪಾಲಿಸಿ, ಬೂಸ್ಟರ್ ಡೋಸ್ ಪಡೆಯಬೇಕು ಎಂದು ಸಲಹೆ ನೀಡಿದರು.
ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಓಮಿಕ್ರಾನ್ ಒಳಗೊಂಡಂತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮೂರನೇ (ಬೂಸ್ಟರ್) ಡೋಸ್ ಲಸಿಕೆ ಅಭಿಯಾನಯನ್ನು ಪ್ರಾರಂಭಿಸಲಾಗಿದ್ದು, ಈ ಹಿಂದೆ ಎರಡನೇ ಡೋಸ್ ಲಸಿಕೆ ಪಡೆದ ಒಂಭತ್ತು ತಿಂಗಳ ನಂತರ ಇದನ್ನು ನೀಡಲಾಗುತ್ತದೆ ಎಂದರು.
3552 ಆರೋಗ್ಯ ಕಾರ್ಯಕರ್ತರು, 614 ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಇರುವ ಫಲಾನುಭವಿಗಳು 879 ಮಂದಿ ಇದ್ದು, ಮೂರನೇ ಮುನ್ನೆಚ್ಚರಿಕಾ ಡೋಸ್ ನೀಡಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಗಂಗಾಧರ ರೆಡ್ಡಿ, ರಂಗಾರೆಡ್ಡಿ, ವೆಂಕಟೇಶ್, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಯಾದ ಜಾನಕಿ, ಪರ್ವಿನ್, ಆಲಿ, ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
[t4b-ticker]
+ There are no comments
Add yours