ಚಿತ್ರದುರ್ಗ,ಏಪ್ರಿಲ್05:
ಶಿಕ್ಷಣವನ್ನು ಪಡೆದರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಮತ್ತು ಜೀವನದ ಗುರಿಗಳನ್ನು ಮುಟ್ಟಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ರವಿಶಂಕರ್ ರೆಡ್ಡಿ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲೆಯ ಉರ್ದು ಪ್ರೌಢಶಾಲೆಗಳ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ ಹಾಗೂ ಉರ್ದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವಿಷಯವಾರು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವ ಜನ್ಮ ದೊಡ್ಡದು ನಾವು ಏನಾದರೂ ಸಾಧನೆ ಮಾಡಿಯೇ ನಮ್ಮ ಜೀವನವನ್ನು ಸಾರ್ಥಕತೆ ಮಾಡಿಕೊಳ್ಳಬೇಕು. ಅನೇಕ ಸಾಧಕರು ಸಾಧನೆಗೈದಿದ್ದು, ತಮ್ಮ ಪರಿಶ್ರಮದ ಫಲವಾಗಿ ದೊಡ್ಡ ವ್ಯಕ್ತಿಗಳಾಗಿದ್ದಾರೆ ಎಂದರು.
ಭಾಷೆ ಯಾವುದಾದರೇನು ಪರಿಶ್ರಮದಿಂದ ಹಲವಾರು ಭಾಷೆಗಳನ್ನು ಕಲಿಯಬಹುದು. ಭಾಷೆ ಕಲಿಯುವಾಗ ಮೊದಲು ಆಲಿಸಬೇಕು, ಮಾತನಾಡಬೇಕು, ಓದಬೇಕು, ಬರೆಯಬೇಕು ಹೀಗೆ ಶ್ರೇಣಿಕೃತ ಕಲಿಕೆಯಲ್ಲಿ ಸಾಗಿದಾಗ ಮಾತ್ರ ಭಾಷಾ ಕಲಿಕೆ ಸುಲಭವಾಗುತ್ತದೆ ಎಂದರು.
ಸಾಂಕ್ರಾಮಿಕ ರೋಗ ಕೊರೊನಾ ಸಂಕಷ್ಟದ ಕಾಲದಲ್ಲಿ ಎಲ್ಲರೂ ಜಾಗೃತರಾಗಿರಬೇಕು. ಇದು ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿದೆ. ಶಾಲೆಗಳಿಗೆ ಮಕ್ಕಳು ಬಾರದಿರುವುದರಿಂದ ಅನೇಕ ಸಾಮಾಜಿಕ ಪಿಡುಗುಗಳಿಗೆ ಕಾರಣವಾಗಿದೆ. ಶಿಕ್ಷಕರು ಮಕ್ಕಳೊಂದಿಗೆ ಸದಾ ಸಂಕರ್ಪದಲ್ಲಿರುವುದರ ಮೂಲಕ ಸದಾ ಚಟುವಟಿಕೆಯಲ್ಲಿ ತೊಡಗಿಸಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಎಸ್ಎಸ್ಎಲ್ಸಿ ಉರ್ದು ವಿದ್ಯಾರ್ಥಿಗಳಿಗೆ ಪರೀಕ್ಷಾ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳು ಬೋಧನೆ ಮಾಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿದ್ದಪ್ಪ, ಕನ್ನಡ ವಿಷಯ ಪರಿವೀಕ್ಷಕರಾದ ಶಿವಣ್ಣ, ಇಂಗ್ಲಿಷ್ ವಿಷಯ ಪರಿವೀಕ್ಷಕರಾದ ಚಂದ್ರಣ್ಣ, ಉರ್ದು ಶಿಕ್ಷಣ ಸಂಯೋಜಕಿ ಸಯದ್ ಸಮೀರಾ, ಮುಸ್ಲಿಂ ನೌಕರರ ಸಂಘದ ಅಧ್ಯಕ್ಷ ಅಫಕ್ ಅಹಮ್ಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
[t4b-ticker]
+ There are no comments
Add yours