ಚಿತ್ರದುರ್ಗ,: ನ್ಯಾ.ಸದಾಶಿವ ಆಯೋಗದ ವರದಿ ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದೆಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿಯವರಿಗೆ ಚಿತ್ರದುರ್ಗ ಜಿಲ್ಲಾ ಭೋವಿ ಸಂಘ ಮನವಿ ಸಲ್ಲಿಸಿದರು. ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಐಕ್ಯತೆಗೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾ ಭೋವಿ ಸಂಘ ಬೆಂಬಲಿಸುತ್ತದೆ ಹಾಗೂ ರಾಜ್ಯದ 224 ಶಾಸಕರಿಗೆ ಮನವಿ ಸಲ್ಲಿಸುವ ಚಳುವಳಿಗೆ ಭೋವಿ ಸಂಘ ಜೊತೆಯಿದ್ದು, ಹೋರಾಟದ ಎಲ್ಲಾ ಹಂತದಲ್ಲೂ ಸಂರಕ್ಷಣಾ ಒಕ್ಕೂಟದ ಪರವಾಗಿ ನಿಲ್ಲುತ್ತದೆ.
ನ್ಯಾ. ಸದಾಶಿವ ಆಯೋಗದ ವರದಿಯ ಬಹಿರಂಗ ಚರ್ಚೆಯಿಲ್ಲದೆ ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು.
ನ್ಯಾ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು. ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ಮತ್ತು ಆಸಕ್ತರಿಗೆ ಸಂಘ ಸಂಸ್ಥೆಗಳಿಗೆ ಈ ವರದಿಯ ದೃಢೀಕೃತ ಪ್ರತಿಯನ್ನು ನೀಡಬೇಕು. ಆಕ್ಷೇಪಣೆ, ತಕರಾರು ಮತ್ತು ನ್ಯಾಯ ಸಮ್ಮತ ತಿದ್ದುಪಡಿಗಳನ್ನು ಸೂಚಿಸಲು ಕಾಲಾವಕಾಶ ನೀಡಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕಾಗಿ ಶಿಫಾರಸ್ಸು ಮಾಡಿರುವ ನ್ಯಾ. ನಾಗಮೋಹನ ದಾಸ್ ಅವರ ವರದಿಯನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಬೇಕು.
ರಾಜ್ಯದ ಎಲ್ಲಾ ಜಾತಿ, ಜನಾಂಗ, ಬುಡಕಟ್ಟುಗಳ ವಾಸ್ತವ ಸ್ಥಿತಿಗತಿಗಳನ್ನು ಅರಿಯುವಂತಾಗಲು ಹಿಂದಿನ ಸರ್ಕಾರ ತಯಾರಿಸಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಜಿಲ್ಲಾ ಭೋವಿ ಸಂಘದ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಕಾರ್ಯದರ್ಶಿ ಹೆಚ್.ಲಕ್ಷ್ಮಣ್, ಡಾ.ರವಿಕುಮಾರ್, ಗುತ್ತಿಗೆದಾರ ರಾಜಪ್ಪ, ಮೆದೇಹಳ್ಳಿ ಪುರುಷೋತ್ತಮ್, ಚಂದ್ರು, ವಿ.ಆರ್.ಮೋಟಾರ್ಸ್ ನಾಗರಾಜು ಉಪಸ್ಥಿತರಿದ್ದರು.
[t4b-ticker]
+ There are no comments
Add yours