ಚಿತ್ರದುರ್ಗ ಡಿ. 15 (ಕರ್ನಾಟಕ ವಾರ್ತೆ) :
ಜಿಲ್ಲೆಯಲ್ಲಿ ಅಂಗನವಾಡಿಗಳಲ್ಲಿ ದಾಖಲಾಗಿರುವ ಮಕ್ಕಳ ಆರೋಗ್ಯವನ್ನು ತಜ್ಞ ವೈದ್ಯರುಗಳಿಂದ ನಿಯಮಿತವಾಗಿ ತಪಾಸಣೆ ಮಾಡಿಸಬೇಕು ಎಂದು ಆರ್ಥಿಕ ಇಲಾಖೆ (ವೆಚ್ಚ) ಸರ್ಕಾರದ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್ ಸೂಚನೆ ನೀಡಿದರು.
ಹಿರಿಯೂರು ತಾಲ್ಲೂಕು ಐಮಂಗಲದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಗುರುವಾರದಂದು ದಿಢೀರ್ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಅಂಗನವಾಡಿ ಮಕ್ಕಳೊಂದಿಗೆ ಕುಳಿತು, ಸಂತಸದಿಂದ ಕುಶಲೋಪರಿ ವಿಚಾರಿಸಿದರು. ಮಕ್ಕಳೊಂದಿಗೆ ಮಾತನಾಡಿದ ಅವರು, ಅಂಗನವಾಡಿಯಲ್ಲಿ ನೀಡಲಾಗುವ ಆಹಾರ, ಶೇಂಗಾಚಿಕ್ಕಿ, ಮೊಟ್ಟೆ ವಿತರಣೆ ಕುರಿತು ಮಾಹಿತಿ ಪಡೆದರು. ಅಂಗನವಾಡಿ ಮಕ್ಕಳ ಕಲಿಕಾ ಸಾಮಥ್ರ್ಯ ವೃದ್ಧಿಗೆ ಈಗ ಇರುವ ಆಟಿಕೆಗಳೊಂದಿಗೆ ಇನ್ನಷ್ಟು ಸುಧಾರಿತ ಆಟಿಕೆಗಳನ್ನು ನೀಡಲು ಸಿದ್ಧವಿದ್ದು, ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು. ಅಂಗನವಾಡಿಗಳಲ್ಲಿ ಅಪೌಷ್ಠಿಕ ಮಕ್ಕಳ ಆರೋಗ್ಯ ಸುಧಾರಣೆಗೆ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ಪೂರಕ ಪೌಷ್ಠಿಕ ಆಹಾರ ಪೂರೈಕೆ ಕುರಿತು ಅಲ್ಲದೆ, ಗರ್ಭಿಣಿ, ಬಾಣಂತಿಯರಿಗೆ ನೀಡಲಾಗುವ ಪೌಷ್ಠಿಕ ಆಹಾರ ನೀಡಿಕೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಕನಿಷ್ಟ ಮೂರು ತಿಂಗಳಿಗೊಮ್ಮೆ ಅಂಗನವಾಡಿ ಮಕ್ಕಳ ಆರೋಗ್ಯವನ್ನು ತಜ್ಞ ವೈದ್ಯರುಗಳಿಂದ ನಿಯಮಿತವಾಗಿ ಮಾಡಿಸಬೇಕು ಎಂದು ಡಾ. ಪಿ.ಸಿ. ಜಾಫರ್ ಅವರು ನಿರ್ದೇಶನ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪರಿಶೀಲನೆ :
****************ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವೀಕ್ಷಕ ಅಧಿಕಾರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್ ಅವರು, ಐಮಂಗಲ, ಬೀರೇನಹಳ್ಳಿ, ಅಮ್ಮನಟ್ಟಿ, ಬಬ್ಬೂರು ಮುಂತಾದ ಗ್ರಾಮಗಳಿಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಸೂಪರ್ ಚೆಕ್ ಕಾರ್ಯದಡಿ ಭೇಟಿ ನೀಡಿ, ಕಳೆದ ಡಿ. 08 ರವರೆಗೂ ಕೈಗೊಂಡ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪರಿಶೀಲನೆಯನ್ನು ನಡೆಸಿದರು. ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ, ಹೆಸರು ಸ್ಥಳಾಂತರ, ಹೆಸರು ತೆಗೆದುಹಾಕುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಬಿಎಲ್ಒ ಅವರಿಗೆ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ, ಕೆಲವು ಅರ್ಜಿ ನಮೂನೆಗಳನ್ನು ಬಿಎಲ್ಒ ಅವರಿಂದ ಪಡೆದು, ನಮೂನೆ ಭರ್ತಿ ಮಾಡಿ ಸಲ್ಲಿಸಿರುವ ಸಾರ್ವಜನಿಕರ ಮನೆಗಳಿಗೆ ದಿಢೀರ್ ಭೇಟಿ ನೀಡಿ, ಸಂಬಂಧಪಟ್ಟ ಅರ್ಜಿದಾರರಿಂದಲೇ ನೇರವಾಗಿ ಮಾಹಿತಿ ಪಡೆದು, ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಮತಗಟ್ಟೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿಲ್ಲಾ ಪಂಚಾಯತ್ ಸಿಇಒ ಎಂ.ಎಸ್. ದಿವಾಕರ್, ತಹಸಿಲ್ದಾರ್ ಪ್ರಶಾಂತ್ ಪಾಟೀಲ್ ಸೇರಿದಂತೆ ಸಂಬಂಧಪಟ್ಟ ಬಿಎಲ್ಒಗಳು ಇದ್ದರು.
+ There are no comments
Add yours