ಬಳ್ಳಾರಿ ಬಿಜೆಪಿ ಎಸ್ಟಿ ಸಮಾವೇಶಕ್ಕೆ ಲಕ್ಷಾಂತರ ಜನ ಬನ್ನಿ: ಸಚಿವ ಬಿ.ಶ್ರೀರಾಮುಲು

 

 

 

 

ಚಿತ್ರದುರ್ಗ: (chitrdaurga)  ಮೀಸಲಾತಿಯನ್ನು ಶೇ.3.5 ರಿಂದ ಶೇ.7 ಕ್ಕೆ ಹೆಚ್ಚಿಸಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ನ.20 ರಂದು ಬಳ್ಳಾರಿಯಲ್ಲಿ ನಡೆಯಲಿರುವ ಎಸ್.ಟಿ.ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನಾಯಕ ಸಮಾಜದವರು ಭಾಗವಹಿಸುವಂತೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಸಮುದಾಯದವರಲ್ಲಿ ಮನವಿ ಮಾಡಿದರು.
ಚಳ್ಳಕೆರೆ ಟೋಲ್‍ಗೇಟ್‍ನಲ್ಲಿರುವ ಎಸ್.ಎಸ್.ಕೆ.ಸ್. ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಎಸ್.ಟಿ.ಸಮಾವೇಶದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.B.sriramulu

ಮೀಸಲಾತಿ ಹೆಚ್ಚಳಕ್ಕಾಗಿ ಅನೇಕ ವರ್ಷಗಳಿಂದಲೂ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಯಿತು. ಅದರಂತೆ ನಾಯಕ ಸಮಾಜದ ಸ್ವಾಮೀಜಿಗಳಾದ ಪ್ರಸನ್ನಾನಂದ ಸ್ವಾಮಿಗಳು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ನಡೆಸಿದ ಫಲವಾಗಿ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸಿರುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಾಯಕ ಸಮಾಜದಿಂದ ಕೃತಜ್ಞತೆ ಅರ್ಪಿಸಬೇಕಾಗಿದೆ. ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಯಿಂದ ಐದು ಲಕ್ಷ ಜನ ನಾಯಕ ಸಮಾಜದವರು ಬಳ್ಳಾರಿ ಸಮಾವೇಶಕ್ಕೆ ಆಗಮಿಸಿದರೆ ಬಳ್ಳಾರಿ ಜಿಲ್ಲೆ ಒಂದರಿಂದಲೆ ಎರಡುವರೆ ಲಕ್ಷದಷ್ಟು ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲಾಗುತ್ತಿದೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.

 

 

ಮಾಜಿ ಸಚಿವ ಶಿವನಗೌಡ ನಾಯಕ ಮಾತನಾಡಿ ನಾಯಕ ಸಮಾಜದ ಮೀಸಲಾತಿಯನ್ನು ಹೆಚ್ಚಿಸಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಕೃತಜ್ಞತೆ ಸಲ್ಲಿಸುವ ಅತ್ಯುತ್ತಮ ಸಮಾವೇಶಕ್ಕೆ ನಾಯಕ ಸಮಾಜದಿಂದ ಲಕ್ಷಾಂತರ ಜನ ಸೇರಿ ಶಕ್ತಿ ಪ್ರದರ್ಶಿಸಬೇಕು. ಇದರಿಂದ ಮೀಸಲಾತಿ ನೀಡಿದವರ ಮನಸ್ಸಿಗೂ ಖುಷಿ ಅನ್ನಿಸುತ್ತದೆ. ಮೀಸಲಾತಿ ಹೆಚ್ಚಿಸುವುದೆಂದರೆ ಸುಲಭದ ಕೆಲಸವಲ್ಲ. ನಾಯಕ ಸಮುದಾಯ ಸಂಪೂರ್ಣವಾಗಿ ಬಿಜೆಪಿ.ಗೆ ಬೆಂಬಲಿಸಲಿದೆ ಎನ್ನುವ ಭಯ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಇವರುಗಳನ್ನು ಕಾಡುತ್ತಿದೆ. ಹಾಗಾಗಿ ಮೀಸಲಾತಿ ಹೆಚ್ಚಿಸಿರುವ ಬಗ್ಗೆ ಹಗುರವಾದ ಮಾತುಗಳನ್ನಾಡುತ್ತಿದ್ದಾರೆಂದು ಟೀಕಿಸಿದರು.

 

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ  G.H.thippareddy  ಮಾತನಾಡಿ ಬಿಜೆಪಿ.ಎಂದರೆ ಕೇವಲ ಮುಂದವರೆದ ಜನಾಂಗಕ್ಕೆ ಸೇರಿದ ಪಕ್ಷ ಎನ್ನುವ ಭಾವನೆಯಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಪ್ರತಿ ಮನೆ, ಹಳ್ಳಿಗಳಲ್ಲಿ ಬಿಜೆಪಿ.ಯಿದೆ. ಶ್ಯಾಂಪ್ರಸಾದ್ ಮುಖರ್ಜಿ, ಪಂಡಿತ್ ದೀನ್‍ದಯಾಳ್ ಇವರುಗಳು ಕಟ್ಟಿ ಬೆಳೆಸಿರುವ ಪಕ್ಷಕ್ಕೆ ತನ್ನದೆ ಆದ ಸಿದ್ದಾಂತವಿದೆ. ಪಕ್ಷಕ್ಕೆ ನಿಷ್ಟರಾಗಿ ದುಡಿದವರನ್ನು ಹುಡುಕಿ ಹುಡುಕಿ ಅಧಿಕಾರ ಕೊಡುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ.ಮಾತ್ರ ಎಂದು ಗುಣಗಾನ ಮಾಡಿದರು.
ಕಳೆದ ಮೂವತ್ತು ನಲವತ್ತು ವರ್ಷಗಳಿಂದಲೂ ನಾಯಕ ಜನಾಂಗ ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟ ಮಾಡಿಕೊಂಡು ಬಂದರೂ ಇಲ್ಲಿಯವರೆಗೂ ಅಧಿಕಾರ ನಡೆಸಿದ ಕಾಂಗ್ರೆಸ್ ಈ ಸಮುದಾಯದವರನ್ನು ಕೇವಲ ಮತಕ್ಕಾಗಿ ಬಳಸಿಕೊಂಡಿದ್ದನ್ನು ಬಿಟ್ಟರೆ ಯಾವ ಅನುಕೂಲ ಮಾಡಲಿಲ್ಲ. ಗುಡ್ಡಗಾಡಿನ ಹೆಣ್ಣು ಮಗಳು ದ್ರೌಪದಿ ಮುರ್ಮುರವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಕೀರ್ತಿ ಬಿಜೆಪಿ.ಗೆ ಸಲ್ಲುತ್ತದೆ. ನಾಗಮೋಹನ್‍ದಾಸ್ ಸಮಿತಿ ನೀಡಿದ ವರದಿ ಹಾಗೂ ಪ್ರಸನ್ನಾನಂದ ಸ್ವಾಮೀಜಿ ಪಟ್ಟುಬಿಡದೆ ನಡೆಸಿದ ಧರಣಿಗೆ ರಾಜ್ಯ ಸರ್ಕಾರ ಕೇಂದ್ರದ ಒಪ್ಪಿಗೆ ಪಡೆದು ಮೀಸಲಾತಿಯನ್ನು ಹೆಚ್ಚಿಸಿದೆ. ಅದಕ್ಕಾಗಿ ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಮುಂದಿನ ತಿಂಗಳು ಬಳ್ಳಾರಿಯಲ್ಲಿ ನಡೆಯುವ ಎಸ್.ಟಿ.ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನಾಯಕ ಸಮಾಜದವರನ್ನು ಕೋರಿದರು.
ಮೋದಿ ದೇಶದ ಪ್ರಧಾನಿಯಾದ ಮೇಲೆ ಭಾರತ ನಂ.1 ನೇ ಸ್ಥಾನದಲ್ಲಿದೆ. ಮೋದಿಯನ್ನು ಪ್ರಧಾನಿಯನ್ನಾಗಿ ಪಡೆದಿರುವುದೇ ಭಾರತದ ಇತಿಹಾಸ, ನಾಯಕ ಸಮಾಜಕ್ಕೆ ಒತ್ತು ಕೊಡುವ ಕೆಲಸವನ್ನು ಬಿಜೆಪಿ.ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಬಳ್ಳಾರಿಯಲ್ಲಿ ನ.20 ರಂದು ನಡೆಯುವ ಎಸ್.ಟಿ.ಮೋರ್ಚಾ ಸಮಾವೇಶದಲ್ಲಿ ರಾಜ್ಯ ಹಾಗೂ ರಾಷ್ಟ್ರ ನಾಯಕರುಗಳು ಆಗಮಿಸಲಿರುವುದರಿಂದ ಜಿಲ್ಲೆಯಿಂದ ನಾಯಕ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ತೆರಳಬೇಕು. ರಾಜ್ಯದ ಮುಖ್ಯಮಂತ್ರಿಗೆ ಅಭಿನಂದಿಸುವ ಈ ಸಮಾವೇಶದಲ್ಲಿ ಜಿಲ್ಲೆಯಿಂದ ಒಂದು ಲಕ್ಷದಷ್ಟು ನಾಯಕ ಸಮಾಜದವರು ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಬಿಜೆಪಿ.ಎಸ್.ಟಿ. ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜ್ ಹವಾಲ್ದಾರ್ ಮಾತನಾಡಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜೈಪಾಲ್, ನರೇಂದ್ರ, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ಶಿವಣ್ಣ, ಯುವ ಮುಖಂಡ ಅನಿತ್‍ಕುಮಾರ್, ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಜೈರಾಂ, ನರಸಿಂಹ ನಾಯಕ, ಹೇಮಲತ ವೇದಿಕೆಯಲ್ಲಿದ್ದರು.

[t4b-ticker]

You May Also Like

More From Author

+ There are no comments

Add yours