ನಾಯಕನಹಟ್ಟಿ ದೊಡ್ಡಕೆರೆಗೆ ಸಚಿವ ಶ್ರೀರಾಮುಲು ಬಾಗಿನ ಅರ್ಪಣೆ.
ಚಳ್ಳಕೆರೆ-30 ಅವಧೂತ ಶ್ರೀ ತಿಪ್ಪೇರುದ್ರಸ್ವಾಮಿ ನಿರ್ಮಿಸಿದ ನಾಯಕನಹಟ್ಟಿಯ ಐತಿಹಾಸಿಕ ದೊಡ್ಡಕೆರೆ, ಹತ್ತು ವರ್ಷದ ನಂತರ ಭರ್ತಿಯಾಗಿದೆ. ರಾಜ್ಯದಲ್ಲೇ ಕಡಿಮೆ ಮಳೆ ಬೀಳುವ ನಾಯಕನಹಟ್ಟಿ ಸುತ್ತಮುತ್ತಲಿನ ಪ್ರದೇಶಗಳಿಗೆ ಕೆರೆಗಳೇ ಜೀವಾಳ. ವರುಣ ಕೃಪೆಯಿಂದ ಈ ಬಾರಿ ನಾಯಕನಹಟ್ಟಿ ಸುತ್ತಮುತ್ತಲಿನ ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಶುಕ್ರವಾರ ದೊಡ್ಡಕೆರೆಗೆ ಬಾಗಿನ ಅರ್ಪಸಿದರು.
ನಾಯಕನಹಟ್ಟಿ ಪಟ್ಟಣದಲ್ಲಿ ಉತ್ಸಾಹ ಮನೆ ಮಾಡಿತ್ತು. ಅವಧೂತ ಶ್ರೀ ತಿಪ್ಪೇರುದ್ರಸ್ವಾಮಿಗಳು ಒಳ ಮಠಕ್ಕೆ ಆಗಮಿಸಿದ ಸಚಿವ ಬಿ.ಶ್ರೀರಾಮುಲು ದೇವರಿಗೆ ನಮಿಸಿ, ಬಾಗಿನ ಅರ್ಪಿಸುವ ತೊಟ್ಟಿಲನ್ನು ಭಕ್ತರೊಂದಿಗೆ ಕೈಗೂಡಿಸಿ ಸ್ವತಃ ಹೊತ್ತುಂದು ಸಿಂಗರಿಸಿದ್ದ ಎತ್ತಿನ ಬಂಡಿಯಲ್ಲಿ ಇರಿಸಿದರು. ಪೂರ್ಣ ಕುಂಬ ಹೊತ್ತ ನೂರಾರು ಮಹಿಳೆಯರು, ಡೊಳ್ಳು ಸಮೇತ ಪಟ್ಟಣದಲ್ಲಿ ಮೆರವಣಿಯ ಸಮೇತ ದೊಡ್ಡ ಕೆರೆ ತೆರಳಿಸಿದರು. ಸಚಿವ ಶ್ರೀರಾಮುಲು ಅಭಿಮಾನಿಗಳು ರಸ್ತೆಯುದ್ಧಕ್ಕೂ ಜೈಕಾರ ಕೂಗಿದರು. ಹೂವಿನ ಮಳೆಗರೆದರು.
ದೊಡ್ಡಕೆರೆಯ ಹಿನ್ನೀರಿನ ಪ್ರದೇಶಲ್ಲಿ ಸಾಂಗೋಪವಾಗಿ ಪೂಜೆ ನೆರೆವೇರಿಸಿದ ಬಳಿಕ ಸಚಿವ ಶ್ರೀರಾಮುಲು ಅವರು ಬಾಗಿನ ತೊಟ್ಟಿಲನ್ನು ಕೆರೆ ನೀರಿಗೆ ಅರ್ಪಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಮಾಡಿದಷ್ಟು ನೀಡು ಭೀಕ್ಷೆಎನ್ನುವಂತೆ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿರವರ ಮುಂದಾಲೋಚನೆ ಕ್ರಮವಾಗಿ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿದ್ಧಾರೆ. ಇದೇ ಗ್ರಾಮದ ಮತ್ತೊಂದು ಚಿಕ್ಕಕೆರೆ ನೀರಿಲ್ಲದೆ ಬರಿದಾಗಿದ್ದು, ಆ ಕೆರೆಗೂ ನೀರಿನ ಸೌಲಭ್ಯ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಹಿರಿಯ ಮುಖಂಡ ಎತ್ತಿನಹಟ್ಟಿಗೌಡ ಮಾತನಾಡಿ, ಈ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಸಚಿವರಾದ ಬಿ.ಶ್ರೀರಾಮುಲು ಮಾಡಿದ್ಧಾರೆ. ಈ ಕ್ಷೇತ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬೇರೆ ಪಕ್ಷದ ಯಾವ ಶಾಸಕರೂ ಸಹ ಇಂತಹ ಕಾರ್ಯಗಳನ್ನು ರೂಪಿಸಿಲ್ಲ.ಆದರೆ, ಕೆಲವು ನಾಯಕರು ಮಾತ್ರ ಸುಳ್ಳು ಪ್ರಚಾರದ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೆಲಸ ಮಾಡುತ್ತಿದ್ಧಾರೆ. ಮುಂಬರುವ ದಿನಗಳಲ್ಲಿ ಮತದಾರ ಇಂತಹವರಿಗೆ ಬುದ್ದಿ ಕಲಿಸುತ್ತಾರೆಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ, ಮುಖಂಡರಾದ ರಾಮರೆಡ್ಡಿ, ಪಾಟೀಲ್ ಜಿ.ಎಂ.ತಿಪ್ಪೇಸ್ವಾಮಿ, ಪಿ.ಬಿ.ತಿಪ್ಪೇಸ್ವಾಮಿ, ಪ್ರಕಾಶ್ ರೆಡ್ಡಿ, ಎನ್.ಮಹಾಂತೇಶ್,ರಾಮದಾಸ್, ಪಾಪೇಶ್ನಾಯಕ ಸೇರಿದಂತೆ ಮತ್ತಿತರರು ಉಪಸ್ಥತರಿದ್ದರು.
+ There are no comments
Add yours