ಚಿತ್ರದುರ್ಗ:ಜಿಲ್ಲಾ ಒಕ್ಕಲಿಗರ ಸಂಘದ ಕಟ್ಟಡ ಪೂರ್ಣಗೊಳ್ಳಬೇಕಾಗಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಬಳಿ ಹೋಗಿ ಅನುದಾನ ಕೇಳೋಣ ಎಂದು ಕೌಶಲ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ ಭರವಸೆ ನೀಡಿದರು.
ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮುಂಭಾಗವಿರುವ ವಕ್ಕಲಿಗರ ಸಂಘದ ಕಟ್ಟಡದಲ್ಲಿ ಭಾನುವಾರ ಕರೆಯಲಾಗಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಜನಾಂಗದ ಪ್ರಶ್ನೆ ಬಂದಾಗ ಎಲ್ಲಿಯೂ ರಾಜಕೀಯ ಬೆರೆಸುವುದು ಬೇಡ. ಸಮುದಾಯ ಭವನ, ಮಳಿಗೆ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿಕೊಳ್ಳೋಣ. ಐ.ಎ.ಎಸ್, ಐ.ಪಿ.ಎಸ್.ಪರೀಕ್ಷೆಯಲ್ಲಿ ನಮ್ಮ ಜನಾಂಗದ ನಾಲ್ವರು ತೇರ್ಗಡೆಯಾಗಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯಲು ಬೆಂಗಳೂರು, ದೆಹಲಿಗೆ ಹೋಗಲು ಅನುಕೂಲ ಮಾಡಿಕೊಡಲಾಗುವುದು. ಐ.ಎ.ಎಸ್.ಪರೀಕ್ಷೆ ತೆಗೆದುಕೊಳ್ಳಲು ದೆಹಲಿಗೆ ಹೋಗುವವರಿಗೆ ವಸತಿ ಕಲ್ಪಿಸಲಾಗಿದೆ. ವಕ್ಕಲಿಗರ ಸಮುದಾಯಕ್ಕೆ ಕಲ್ಯಾಣ ಮಂಟಪ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್ಗಳನ್ನು ತೆರೆಯಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಏನೇನಿದೆ ಎನ್ನುವುದನ್ನು ಮೊದಲು ತಿಳಿದುಕೊಂಡು ಸವಲತ್ತುಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ವಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಪ್ಪ, ನಾಗರಾಜ್, ಲಕ್ಷ್ಮಿಕಾಂತ್, ರಮೇಶ್, ಜಗನ್ನಾಥ್, ಭೈರಸಿದ್ದಪ್ಪ, ವೀರಣ್ಣ, ಕೇಶವಮೂರ್ತಿ ಸೇರಿದಂತೆ ವಕ್ಕಲಿಗರ ಸಮಾಜದ ಅನೇಕ ಮುಖಂಡರುಗಳು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಾಜರಿದ್ದರು.
[t4b-ticker]
+ There are no comments
Add yours