ಚಿತ್ರದುರ್ಗ: ನರೇಗಾದಲ್ಲಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಎಲ್ಲರಂತೆ ಬದುಕಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಮಂಗಳಮುಖಿಯರಿಗೆ ಸಲಹೆ ನೀಡಿದರು.
ಅಮರ ಸಾಧಕಿ ಸಮಾಜ ಸೇವಾ ಸಂಘ, ಸ್ವಾವಲಂಭಿ ಒಕ್ಕೂಟ ಭರಮಸಾಗರ, ಅರ್ಧನಾರೀಶ್ವರ ಕಲಾಸಂಘ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ಟೇಡಿಯಂ ಸಮೀಪವಿರುವ ಬಾಲಭವನದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಕಳೆದ ಎರಡು ದಿನಗಳ ಹಿಂದೆ ಹಮ್ಮಿಕೊಳ್ಳಲಾಗಿದ್ದ ಮೇಕೆ, ಕೋಳಿಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಂಗಳಮುಖಿಯರನ್ನು ಸಮಾಜ ಕೀಳಾಗಿ ನೋಡಬಾರದು. ಗೌರವದಿಂದ ಕಾಣಬೇಕು. ಬೇರೆಯವರಂತೆ ಲೈಂಗಿಕ ಅಲ್ಪಸಂಖ್ಯಾತರಿಗೂ ಸಮಾನವಾದ ಹಕ್ಕಿದೆ. ಎಲ್ಲವನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ತಿಳಿಸಿದರು.
ಅಮರ ಸಾಧಕಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಡಾ.ಅರುಂಧತಿ, ಮಂಗಳಮುಖಿ ಫೌಂಡೇಷನ್ ಟ್ರಸ್ಟ್ನ ಆರತಿ, ಮಲ್ಲು, ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುವರ್ಣಮ್ಮ ಹಾಗೂ ಇನ್ನಿತರೆ ಲೈಂಗಿಕ ಅಲ್ಪಸಂಖ್ಯಾತರು ಸಮಾರಂಭದಲ್ಲಿ ಭಾಗವಹಿಸಿದ್ದರು.
ರಾಯಚೂರು, ಮಂಡ್ಯ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಂಗಳೂರಿನ ಮಂಗಳಮುಖಿಯರಿಗೆ ತಲಾ ಎರಡು ಮೇಕೆ, ಐದು ಕೋಳಿಗಳನ್ನು ನೀಡಲಾಯಿತು.
+ There are no comments
Add yours