ಚಿತ್ರದುರ್ಗ: ಶೇ.೭.೫ ಮೀಸಲಾತಿಗಾಗಿ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರಸನ್ನಾನಂದಸ್ವಾಮೀಜಿಗಳು ಧರಣಿ ಕುಳಿತು ಮೇ.೨೦ ಕ್ಕೆ ನೂರು ದಿನಗಳಾಗಲಿರುವುದರಿಂದ ಅಂದು ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಲಾಗುವುದೆಂದು ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮೀಸಲಾತಿಗಾಗಿ ನಮ್ಮ ಸಮಾಜದ ಸ್ವಾಮೀಜಿ ಧರಣಿ ಕುಳಿತರೂ ಸರ್ಕಾರ ಸ್ಪಂದಿಸುತ್ತಿಲ್ಲ. ನಾಗಮೋಹನ್ದಾಸ್ ವರದಿ ಆಧಾರದ ಮೇಲೆ ನಮಗೆ ಶೇ.೭.೫ ಮೀಸಲಾತಿ ನೀಡಬೇಕು. ಅದೇ ರೀತಿ ಪರಿಶಿಷ್ಟ ಜಾತಿಗೆ ಶೇ.೨ ರಷ್ಟು ಮೀಸಲಾತಿ ಹೆಚ್ಚಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಿ ಸ್ವಾಮೀಜಿ ಧರಣಿಗೆ ಬೆಂಬಲಿಸುವುದಕ್ಕಾಗಿ ಮೇ.೨೦ ರಂದು ಬೆಳಿಗ್ಗೆ ಗಾಂಧಿವೃತ್ತದಿಂದ ಪ್ರತಿಭಟನೆ ಹೊರಡಲಿದೆ. ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡುತ್ತ ಶೇ.೭.೫ ಮೀಸಲಾತಿಗಾಗಿ ನಮ್ಮ ಸಮಾಜದ ಸ್ವಾಮೀಜಿ ೯೬ ದಿನಗಳಿಂದ ಧರಣಿ ಕುಳಿತಿದ್ದರೂ ಸರ್ಕಾರ ನಮ್ಮನ್ನು ಕೀಳಾಗಿ ಕಾಣುತ್ತಿದೆ. ಅದೇ ಬೇರೆ ಜನಾಂಗದ ಸ್ವಾಮೀಜಿಗಳು ಈ ರೀತಿ ಧರಣಿ ಕುಳಿತಿದ್ದರೆ ಇಡಿ ಸರ್ಕಾರವೇ ಅವರ ಬಳಿ ಬಂದು ಸ್ಪಂದಿಸುತ್ತಿತ್ತು. ಆದಷ್ಟು ಬೇಗನೆ ನಮಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸುವುದಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಹೇಳಿದರು.
ನಗರಸಭೆ ಸದಸ್ಯ ವೆಂಕಟೇಶ್ ಮಾತನಾಡಿ ಸ್ವಾಮೀಜಿಗಳ ಹೋರಾಟಕ್ಕೆ ಸರ್ಕಾರ ಕಿಂಚಿತ್ತು ಕಿಮ್ಮತ್ತು ನೀಡುತ್ತಿಲ್ಲದಿರುವುದು ನಮ್ಮ ಸಮಾಜಕ್ಕೆ ಅತೀವ ನೋವುಂಟಾಗಿದೆ. ಮುಂದೆ ಮೀಸಲಾತಿಗಾಗಿ ಸ್ವಾಮೀಜಿಗಳಿಗೆ ಬೆಂಬಲಿಸಿ ಹೋರಾಟವನ್ನು ಚುರುಕುಗೊಳಿಸಲಾಗುವುದೆಂದರು.
ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯ ತಿಪ್ಪೇಸ್ವಾಮಿ, ನಾಯಕ ಸಮಾಜದ ಡಿ.ಗೋಪಾಲಸ್ವಾಮಿ ನಾಯಕ, ಹೆಚ್.ಅಂಜಿನಪ್ಪ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
[t4b-ticker]
+ There are no comments
Add yours