ಮೃತ ವ್ಯಕ್ತಿಯ ಆಸ್ತಿ ಕಬಳಿಕೆ ಆರೋಪ ಶಾಸಕ ಎಂ.ಚಂದ್ರಪ್ಪ,
ಕುಟುಂಬದವರ ಬಂಧನಕ್ಕೆ ಕಾಂಗ್ರೆಸ್ ಆಗ್ರಹ.
ಹೊಳಲ್ಕೆರೆ: ಜಿಪಿಎ ದುರುಪಯೋಗ ಪಡಿಸಿಕೊಂಡು ಆಸ್ತಿಯ ಕಬಳಿಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಎಂ. ಚಂದ್ರಪ್ಪ ಹಾಗೂ ಕುಟುಂಬಂಸ್ಥರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಪಟ್ಟಣದಲ್ಲಿ ಮಾಜಿ ಸಚಿವ ಎಚ್. ಆಂಜನೇಯ ನೇತೃತ್ವದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ನಡೆಸಿತು.
ಈ ವೇಳೆ ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಶಾಸಕ ಎಂ.ಚಂದ್ರಪ್ಪನವರು ಮೃತಪಟ್ಟಿರುವ ಶ್ರೀಧರ್ ಎಂಬ
ಬಡ ವ್ಯಕ್ತಿಗೆ ಸೇರಿದ 28ರಿಂದ 40 ನಿವೇಶನಗಳನ್ನು
ಅಕ್ರಮವಾಗಿ ಹೆಂಡತಿ ಹಾಗೂ ಇಬ್ಬರು ಮಕ್ಕಳ ಹೆಸರಿಗೆ
ಖಾತೆ ಮಾಡಿಕೊಂಡಿದ್ದಾರೆ. ಬಡವರ ಆಸ್ತಿಯನ್ನು
ಕಾಪಾಡಬೇಕಾದ ವ್ಯಕ್ತಿ ಹಾಡುಹಗಲೇ ವಂಚನೆ
ಮಾಡುವ ಮೂಲಕ ಈ ರಾಜ್ಯದ ಹಾಗೂ ಹೊಳಲ್ಕೆರೆ ಕ್ಷೇತ್ರದ ಮರ್ಯಾದೆಯನ್ನು ಹಾರಾಜು ಹಾಕಿದ್ದಾರೆ. ಪೊಲೀಸರು ಅಸಹಾಯಕರಾಗಿದ್ದು, ವರ್ಗಾವಣೆ ಆಗುವ ಭಯಕ್ಕೆ ಚಂದ್ರಪ್ಪನವರ ವಿರುದ್ಧ ದೂರು ದಾಖಲಿಸಿರಲಿಲ್ಲ. ಆದರೆ ಮೃತ ಶ್ರೀಧರ್ರವರ ಸಹೋದರಿ
ಪದ್ಮಜಾ ಎಂಬುವವರು ತಮಗೆ ಸೇರಬೇಕಾದ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿದ್ದಾರೆ ಎಂದು ನ್ಯಾಯಾಲಯದ ಮೂಲಕ ಚಂದ್ರಪ್ಪ ಹಾಗೂ ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಾಗುವಂತೆ ಮಾಡಿದ್ದಾರೆ. ಜನಸಂಖ್ಯೆ ಕಡಿಮೆ ಇರುವ ಜನಾಂಗದವರ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ಅಕ್ರಮ ಎಸಗಿರುವುದು ಚಂದ್ರಪ್ಪ ಜನಪ್ರತಿನಿಧಿಯಾಗಿ ಉಳಿಯುವುದಕ್ಕೂನಾಲಾಯಕ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಮೃತಪಟ್ಟ ವ್ಯಕ್ತಿಯ
ಆಸ್ತಿಯನ್ನು ಕಬಳಿಕೆ ಮಾಡಿರುವ ಆರೋಪದಲ್ಲಿ
ಕೂಡಲೇ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಂಸದ ಚಂದ್ರಪ್ಪ, ಜಿಲ್ಲಾ
ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ. ಹಾಲೇಶ್, ಜಿಪಂ ಸದಸ್ಯ
ಗಟ್ಟಿಹೊಸಹಳ್ಳಿ ಅಶೋಕ್, ಮಾಜಿ ಸದಸ್ಯ ನರಸಿಂಹರಾಜು,
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿಗೌಡ,
ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಜಗದೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಸಂಪತ್ಕುಮಾರ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ
ಮಧುಪಾಲೇಗೌಡ, ಎನ್ಎಸ್ಯು ಜಿಲ್ಲಾ ಘಟಕದ ಅಧ್ಯಕ್ಷ
ವಿನಯ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ದುರ್ಗ
ಹನುಮಂತಪ್ಪ, ಯೂತ್ ಕಾಂಗ್ರೆಸ್ ಅಧ್ಯಕ್ಷ
ರಂಗಸ್ವಾಮಿ, ಗ್ರಾಪಂ ಸದಸ್ಯ ಲೋಕೇಶ್ ನಾಯ್ಕ್
ಕುಡಿನೀರಕಟ್ಟೆ ಇತರರು ಇದ್ದರು
+ There are no comments
Add yours