ವಸ್ತುವಿನ ಮೇಲೆ ಬೆಳಕು ಬಿದ್ದಾಗ ಅದರ ಪ್ರತಿಫಲನ ಕೋನದಿಂದ ಸೃಷ್ಟಿಯಾಗುವ ಆಕಾರವೇ ನೆರಳು. ಕತ್ತಲು ವೇಳೆಯನ್ನ ಹೊರತುಪಡಿಸಿ ನೆರಳೆನ್ನುವುದು ಸದಾ ನಮ್ಮನ್ನು ಬೆಂಬಿಡದೆ ಯಾವಾಗಲೂ ಹಿಂಬಾಲಿಸುತ್ತದೆ. ಆದರೆ ಇಂತಹ ನೆರಳೂ ಸಹ ಅದೃಶ್ಯವಾಗುವ ಸನ್ನಿವೇಶವೊಂದನ್ನು ಪ್ರಕೃತಿ ವರ್ಷಕ್ಕೆರಡು ಬಾರಿ ರೂಪಿಸಿಕೊಡುತ್ತದೆ. ಖಗೋಳದ ಈ ಅಪರೂಪದ ವಿದ್ಯಮಾನವೇ ಶೂನ್ಯ ನೆರಳಿನ ಕಾಲ. ಇದನ್ನೆ ಜೀರೋ ಶ್ಯಾಡೋ ಡೇ ಎಂದು ಆಚರಿಸಲಾಗುತ್ತದೆ.
ಇಂದು (ಏಪ್ರಿಲ್ 24)ಸೂರ್ಯ ಮಧ್ಯಾಹ್ನ 11.30 ರಿಂದ 1 ಗಂಟೆಯ ಅವಧಿಯಲ್ಲಿ ನಮ್ಮ ನಡು ನೆತ್ತಿಯ ಮೇಲೆ ಬರಲಿರುವ ನಮ್ಮ ನೆರಳನ್ನೇ ಮಾಯ ಮಾಡಿ ಬಿಡಲಿದ್ದಾನೆ. ಇದರಿಂದ ಎಂತಹ ಪ್ರಖರ ಬಿಸಿಲಿದ್ದರೂ ನಮ್ಮ ನೆರಳೇ ಮೂಡದಿರುವ ಖಗೋಳ ವಿಸ್ಮಯ ಬೆಂಗಳೂರಿನಲ್ಲಿ ಜರುಗಲಿದೆ.
ಸಾಮಾನ್ಯವಾಗಿ ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಘಟಿಸುವ ಈ ವಿದ್ಯಮಾನವನ್ನು ಶೂನ್ಯ ನೆರಳಿನ ದಿನ ಎನ್ನುವರು.
ಅನ್ಯ ದಿನಗಳಲ್ಲಿ ಸೂರ್ಯ ನಮ್ಮ ನೆತ್ತಿಯ ಮೇಲೆ ಇದ್ದಂತೆ ಭಾಸವಾಗುತ್ತಿದ್ದರೂ ವಾಸ್ತವದಲ್ಲಿ ತುಸು ಅತ್ತಿತ್ತ ಇರುತ್ತಾನೆ. ಆದರೆ ಶೂನ್ಯ ನೆರಳಿನ ದಿನದಂದು ಸೂರ್ಯ ಝೆನಿತ್ ಅಥವಾ ತುತ್ತತುದಿ ಎಂಬ ಕಾಲ್ಪನಿಕ ಬಿಂದುವಿನ ಮೇಲಿರುತ್ತಾನೆ. ಸೂರ್ಯ ಈ ಕಾಲ್ಪನಿಕ ಬಿಂದುವಿನ ಮೇಲೆ ಹಾದು ಹೋಗುವಾಗ ಆ ನಿರ್ದಿಷ್ಟ ಸ್ಥಳದಲ್ಲಿ ನೆರಳು ಮರೆಯಾಗುತ್ತದೆ. ಸೂರ್ಯ ಉಳಿದ ದಿನಗಳಲ್ಲಿ ಈ ಝೆನಿತ್ನ ತುಸು ಎಡ ಅಥವಾ ಬಲದಲ್ಲಿ ಇರುವುದರಿಂದ ನೆರಳು ಮೂಡುತ್ತಿರುತ್ತದೆ.
ವರ್ಷಕ್ಕೆರಡು ಬಾರಿ ಶೂನ್ಯ ನೆರಳಿನ ದಿನ
ಶೂನ್ಯ ನೆರಳು ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ಏಪ್ರಿಲ್ ಮತ್ತು ಆಗಸ್ಟ್ನಲ್ಲಿ ಘಟಿಸುತ್ತದೆ. ಆದರೆ ಆಗಸ್ಟ್ನಲ್ಲಿ ಮಳೆಗಾಲ ಇರುವುದರಿಂದ ಮೋಡ ಕವಿದ ವಾತಾವರಣದಿಂದಾಗಿ ಶೂನ್ಯ ನೆರಳಿನ ಅನುಭವ ಪಡೆಯುವುದು ಕಷ್ಟ. ಆದರೆ ಏಪ್ರಿಲ್ ತಿಂಗಳಿನಲ್ಲಿ ಸೂರ್ಯ ಪ್ರಖರ ಆಗಿರುವುದರಿಂದ ನೆರಳು ಮರೆಯಾಗುವ ಅನುಭವನ್ನು ಪಡೆಯಬಹುದು.
ಶೂನ್ಯ ನೆರಳಿನ ಸಮಯವನ್ನು ನಿಖರವಾಗಿ ವೈಜ್ಞಾನಿಕ ಸಾಧನಗಳ ಮೂಲಕ ಕಂಡುಕೊಳ್ಳಬಹುದು.
ಕುತೂಹಲ ಉಳ್ಳವರು ತಿಳಿದುಕೊಳ್ಳಲು ಒಂದು ಗಾಜಿನ ಲೋಟವಿದ್ದರೆ ಸಾಕು. ಶೂನ್ಯ ನೆರಳಿನ ದಿನ ನಿಗದಿಯಾದ ತಾರೀಖಿನಂದು ತೆರೆದ ಪ್ರದೇಶದ ನೆಲದಲ್ಲಿ ಗಾಜಿನ ಲೋಟವನ್ನಿಟ್ಟು ಅಥವಾ ಉದ್ದವಾದ ಕಂಬವೊಂದನ್ನು ಹೂತು ಸಮಯವನ್ನು ದಾಖಲು ಮಾಡುತ್ತಾ ಹೋದರೆ ಶೂನ್ಯ ನೆರಳಿನ ನಿಖರ ಸಮಯ ನಿಮ್ಮ ಕಣ್ಮುಂದೆ ಕಾಣಿಸಕೊಳ್ಳುತ್ತದೆ. ಖುದ್ದು ಅದರ ದರ್ಶನವನ್ನೂ ಸಾಮಾನ್ಯರು ಮಾಡಿಕೊಳ್ಳಬಹುದು. ಗಡಿಯಾರದ ಸಮಯದ ಲೆಕ್ಕಾಚಾರದಲ್ಲಿ 11.30 ರಿಂದ12.30ರ ಅವಧಿ.
ನಮ್ಮ ಚಿತ್ರದುರ್ಗದಲ್ಲಿ ಏಪ್ರಿಲ್ 28ರಂದು ಶೂನ್ಯ ನೆರಳಿನ ದಿನವನ್ನು ಕಣ್ತುಂಬಿಕೊಳ್ಳಬಹುದು.
ಕೃಪೆ : ಇಂಟರ್ನೆಟ್
ಲೇಖನ :ಡಾ ಮಹೇಶ್ ಕೆ ಎನ್
ಮುಖ್ಯ ಶಿಕ್ಷಕರು
+ There are no comments
Add yours