ಮರಿಯಮ್ಮನಹಳ್ಳಿ,: ಏ.08: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಮನೆಯ ಒಳಭಾಗ ಸಂಪೂರ್ಣ ಭಸ್ಮವಾಗಿ ನಾಲ್ವರು ಉಸಿರುಕಟ್ಟಿ ಸಾವನ್ನಪ್ಪಿದ ಘಟನೆ ಪಟ್ಟಣದ ವ್ಯಾಪಾರಿ ಡಿ.ರಾಘವೇಂದ್ರ ಶೆಟ್ಟಿಯವರ ಮನೆಯಲ್ಲಿ ಜರುಗಿದೆ.
ಮೃತರನ್ನು ಪಟ್ಟಣದ ಡಿ. ವೆಂಕಟಪ್ರಶಾಂತ್(43), ಪತ್ನಿ ಚಂದ್ರಕಲಾ(38), ಮಕ್ಕಳಾದ ಹಾರ್ದ್ವಿಕ್(17), ಪ್ರೇರಣ(13) ಎನ್ನಲಾಗಿದೆ. ಮೃತರು ಪಟ್ಟಣದ ವ್ಯಾಪಾರಿ ಡಿ.ರಾಘವೇಂದ್ರ ಶೆಟ್ಟಿಯವರ ಮಗ, ಸೊಸೆ ಹಾಗೂ ಮೊಮ್ಮಕ್ಕಳಾಗಿದ್ದಾರೆ.
ರಾತ್ರಿ ಸುಮಾರು 12:30ರ ಸುಮಾರಿಗೆ ಮನೆಯಲ್ಲಿ ಅಳವಡಿಸಿದ್ದ ಎ.ಸಿ.ಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಅಂಗಡಿಯ. ಸಾಮಾನುಗಳಾದ ಸೀಗರೇಟ್ ಬಾಕ್ಸ್ , ಎಣ್ಣೆ ಡಬ್ಬಿಗಳು ಇದ್ದು ಬೆಂಕಿ ಹತ್ತಿ ಧಗಧಗ ಉರಿದು ಸಂಪೂರ್ಣ ಮನೆಯು ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ. ಬೆಂಕಿಯ ತೀವ್ರತೆಗೆ ಮನೆಯ ಕೆಳಮಹಡಿಯಲ್ಲಿದ್ದ ಡಿ. ರಾಘವೇಂದ್ರ ಶೆಟ್ಟಿ ಹಾಗೂ ಅವರ ಪತ್ನಿ ಹರಸಾಹಸ ಪಟ್ಟು ಹೊರ ಬಂದಿದ್ದಾರೆ. ಆದರೆ ಮೇಲ್ಮಹಡಿಯಲ್ಲಿದ್ದ ವೆಂಕಟಪ್ರಶಾಂತ್ ಹಾಗೂ ಕುಟುಂಬದವರು ಬೆಂಕಿಯ ತಾಪಕ್ಕೆ ಹೊರಬರಲಾಗದೇ ಮನೆಯ ಕೋಣೆಯ ಒಳಗಡೆ ಸಿಲುಕಿದ್ದಾರೆ. ಬೆಂಕಿಯ ತೀವ್ರತೆ ಒಂದೆಡೆಯಾದರೇ ಇನ್ನೊಂದೆಡೆ ಕೋಣೆ ತುಂಬಾ ಹೊಗೆ ತುಂಬಿಕೊಂಡು ಸಹಾಯಕ್ಕಾಗಿ ಕೂಗಲೂ ಆಗದೇ ನಾಲ್ಕು ಜನರು ಕೋಣೆಯಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದರಾದರೂ ಕೋಣೆಯ ಒಳಗಿದ್ದ ವೆಂಕಟಪ್ರಶಾಂತ್ ಹಾಗೂ ಕುಟುಂಬದವರನ್ನು ರಕ್ಷಿಸಲಾಗಲಿಲ್ಲ.
ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಹರೀಶ್, ಹ.ಬೊ.ಹಳ್ಳಿ ಸಿಪಿಐ ಮಂಜಣ್ಣ, ಪಟ್ಟಣದ ಪಿಎಸ್ಐ ಹನುಮಂತಪ್ಪ ತಳವಾರ್ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳದ ಬೆಂಕಿ ನಂದಿಸುವ ವಾಹನಗಳು ಆಗಮಿಸಿದ್ದು, ಕೆಳಮಹಡಿ ಹಾಗೂ ಮೇಲ್ಮಹಡಿಯ ಬೆಂಕಿ ನಂದಿಸಲು ಸ್ಥಳೀಯರ ಸಹಾಯ ಪಡೆದರೂ ನಾಲ್ಕು ಜೀವಗಳನ್ನು ಉಳಿಸಿಕೊಳ್ಳಲಾಗಲಿಲ್ಲ.
[t4b-ticker]
+ There are no comments
Add yours