ಬೆಂಗಳೂರು, ಮೇ 25 – ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ತಿನ ಟಿಕೆಟ್ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಾರಣ ಎಂಬ ಮಾಧ್ಯಮ ವರದಿಗಳು ಸರಿಯಲ್ಲ. ಇದರಲ್ಲಿ ಸಂತೋಷ್ ಅವರ ಕೈವಾಡ ಏನು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಲ್ಲಾ ಆರೋಪಗಳಿಗೆ ತೆರೆ ಎಳದಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ತಿನ ಟಿಕೆಟ್ ಕೈತಪ್ಪಿದಕ್ಕೆ ವಿಶೇಷ ಚರ್ಚೆಗಳು ನಡೆಯುತ್ತಿವೆ. ಇದರ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿ.ವೈ. ವಿಜಯೇಂದ್ರ ಅವರು ಸದ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದು ಮುಂದೆ ಕೆಲ ದಿನಗಳಲ್ಲಿ ಕೆಲ ಮಾರ್ಪಾಟುಗಳಾಗಲಿವೆ. ಆಗ ಅವರಿಗೆ ಇನ್ನು ಹೆಚ್ಚಿನ ಅವಕಾಶಗಳು ಸಿಗಬಹುದು ಎಂದು ಹೇಳುವ ಮೂಲಕ ಪಕ್ಷದಲ್ಲಿ ಮುಂದೆ ಬದಲಾವಣೆಗಳಾಗುತ್ತವೆ ಎಂಬ ಸುಳಿವನ್ನು ನೀಡಿದರು.
ಬಿಜೆಪಿ ಪಕ್ಷ ಎಂದೂ ಸಾಮರ್ಥ್ಯ, ಶಕ್ತಿ ಇರುವವರನ್ನು ಕೈ ಬಿಟ್ಟಿಲ್ಲ. ಹಾಗಾಗಿ ವಿಜಯೇಂದ್ರ ಅವರಿಗೂ ಮುಂದೆ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂಬ ವಿಶ್ವಾಸ ತಮ್ಮದು ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ವಿಜಯೇಂದ್ರರವರಿಗೆ ಯಾವ ರೀತಿಯ ಸ್ಥಾನಮಾನಗಳನ್ನು ನೀಡಬೇಕು ಎಂಬ ಬಗ್ಗೆ ತೀರ್ಮಾನಿಸುತ್ತಾರೆ ಎಂದು ಯಡಿಯೂರಪ್ಪ ತಿಳಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆಬದಲಾವಣೆ ಸಮಯ ಬರಲಿ ಎಂದರು.
+ There are no comments
Add yours