ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರಾವೇ ಪ್ರತಿಭಟನೆ
ಚಳ್ಳಕೆರೆ: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಡಿಜಿಟಲ್ ಮೀಟರ್ ಅಳವಡಿಕೆ ಹಾಗೂ ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕ ಕಾರ್ಯಕರ್ತರು ಗುರುವಾರ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಕರಾವೆ ತಾಲ್ಲೂಕು ಪಿ. ಮಂಜುನಾಥ ಮಾತನಾಡಿ, ಕೇಂದ್ರ ಸರ್ಕಾರ ಸದಾ ರೈತ ವಿರೋಧಿ ಕಾಯ್ದೆಗಳು ಜಾರಿಗೆ ಮಾಡುವುದರಿಂದ ರೈತರು ಈಗಾಗಲೇ ಕೊರೋನಾ ಸಂಕಷ್ಟದ ಸಮಯದಲ್ಲೂ ಕೂಡ ತಮಗೆ ಆಗುವ ಅನ್ಯಾಯಗಳನ್ನು ಖಂಡಿಸಿ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೂ ಸಹ ಕೇಂದ್ರ ಸರ್ಕಾರ ಮತ್ತೆ ರೈತರ ಪಂಪ್ ಸೆಟ್ಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆ ಹಾಗೂ ವಿದ್ಯುತ್ ಖಾಸಗೀಕರಣ ಮಾಡಲು ಹೋರಟಿರುವುದು ರೈತರಿಗೆ ದ್ರೋಹ ಮಾಡಿದಂತಾಗುತ್ತದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರು.
ದೇಶಕ್ಕೆ ಬೆನ್ನೆಲುಬಾಗಿ ದುಡಿಯುವ ರೈತನ ಪಂಪ್ ಸೆಟ್ಗಳಿಗೆ ವಿದ್ಯುತ್ ಖಾಸಗೀಕರಣದ ಮೂಲಕ ಡಿಜಿಟಲ್ ವಿದ್ಯುತ್ ಮೀಟರ್ ಅಳವಡಿಸಿ, ರೈತನನ್ನು ಆರ್ಥಿಕ ಇಕ್ಕಟ್ಟಿಗೆ ಸಿಲಿಕಿಸುವಂತ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ವಿದ್ಯುತ್ ಖಾಸಗೀಕರಣ ಮಾಡಿದರೆ ರೈತನು ಕೃಷಿ ಬಿಡುವಂತಾಗುತ್ತದೆ. ಆದ್ದರಿಂದ ವಿದ್ಯುತ್ ಖಾಸಗೀಕರಣ ಮಾಡುವುದನ್ನು ಇಲ್ಲಿಗೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ತಹಶೀಲ್ದಾರ್ ಎನ್. ರಘುಮೂರ್ತಿ ಅವರಿಗೆ ಕರಾವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ಮನವಿ ಸ್ವೀಕರಸಿ ಮಾತನಾಡಿದ ತಹಶೀಲ್ದಾರ್ ನೀವು ಸಲ್ಲಿಸಿದ ಅರ್ಜಿಯನ್ನು ಸರ್ಕಾರದ ಪರವಾಗಿ ಸ್ವೀಕರಿಸಲಾಗಿದೆ, ನಿಮ್ಮ ಅರ್ಜಿಯಲ್ಲಿರುವ ನಿಮ್ಮ ಹಕ್ಕೋತ್ತಾಯಗಳನ್ನು ಯತವತ್ತಾಗಿ ಸರ್ಕಾರದ ಗಮನಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಕರಾವೇ ಉಪಾಧ್ಯಕ್ಷರುಗಳಾದ ಬಿ.ತಿಪ್ಪೇಸ್ವಾಮಿ, ಚಿದಾನಂದ, ಸಂಘಟನಾ ಕಾರ್ಯದರ್ಶಿ ಬಿ. ನಾಗರಾಜ್, ಯುವ ಘಟಕದ ಅಧ್ಯಕ್ಷ ಸೈಯದ್ ನಬಿ, ರಫೀ ಸೇರಿದಂತೆ ಮುಂತಾದವರು ಇದ್ದರು.
+ There are no comments
Add yours