ವೇಣೂರು, ಜುಲೈ 31: ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜವಾನರಾಗಿದ್ದ ಸುರೇಶ ಎನ್. ಅವರ ಸೇವಾ ನಿವೃತ್ತಿ ಪ್ರಯುಕ್ತ ಆಯೋಜಿಸಲಾದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ಆತ್ಮೀಯ ಹಾಗೂ ಗೌರವಯುತವಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ವಿಶ್ವೇಶ್ವರ ಪ್ರಸಾದ್ ಕೆ.ಆರ್. ವಹಿಸಿ ಮಾತನಾಡಿ, ಯಾವುದೇ ಸಂಸ್ಥೆಯ ಯಶಸ್ಸಿನ ಹಿಂದೆ ಸಿಬ್ಬಂದಿಯ ನಿಷ್ಠೆ, ಶಿಸ್ತು ಹಾಗೂ ಕರ್ತವ್ಯಪ್ರಜ್ಞೆ ಮಹತ್ತರ ಪಾತ್ರ ವಹಿಸುತ್ತದೆ. ಸುಮಾರು ೩೭ ವರ್ಷಗಳ ಕಾಲ ಸುರೇಶ ಎನ್. ಅವರು ಸಂಸ್ಥೆಯ ಆಸ್ತಿಯನ್ನು ತಮ್ಮ ಮನೆಯ ಆಸ್ತಿಯಂತೆ ಕಾಪಾಡಿಕೊಂಡು, ಪ್ರಾಮಾಣಿಕತೆ, ಸಮಯಪಾಲನೆ ಹಾಗೂ ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿರುವುದು ಎಲ್ಲರಿಗೂ ಮಾದರಿಯಾಗಿದೆ. ಅವರ ನಿವೃತ್ತಿ ಜೀವನ ಸುಖ, ನೆಮ್ಮದಿ ಹಾಗೂ ಆಯುರಾರೋಗ್ಯದಿಂದ ಕೂಡಿರಲೆಂದು ಶುಭ ಹಾರೈಸಿದರು.

ಸೇವಾ ಮನೋಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಪದ್ಮಾಂಬ ಸಮೂಹ ಸಂಸ್ಥೆಗಳ ಮಾಲಕರಾದ ಜಿನರಾಜ್ ಜೈನ್ ಅವರು ಮಾತನಾಡಿ, ಯಾವುದೇ ಸಂಸ್ಥೆಯ ಅಭಿವೃದ್ಧಿಯಲ್ಲಿ ಆಡಳಿತ ವರ್ಗದಷ್ಟೇ ಸಿಬ್ಬಂದಿಯ ಶ್ರಮವೂ ಮಹತ್ವದ್ದಾಗಿದೆ. ಸುರೇಶ ಎನ್. ಅವರು ತಮ್ಮ ಸುದೀರ್ಘ ಸೇವಾ ಅವಧಿಯಲ್ಲಿ ತೋರಿದ ವಿನಯ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.
ಉತ್ತಮ ಬಾಂಧವ್ಯ
ಹಿರಿಯ ಸಿಬ್ಬಂದಿಗಳಾದ ರತ್ನಾಕರ ರಾವ್ ಎಚ್. ಹಾಗೂ ಸುರೇಶ ದೇವಾಡಿಗ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಸುರೇಶ ಎನ್. ಅವರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡು, ಅವರ ಸರಳ ವ್ಯಕ್ತಿತ್ವ, ಕರ್ತವ್ಯನಿಷ್ಠೆ ಹಾಗೂ ಸಹೋದ್ಯೋಗಿಗಳೊಂದಿಗೆ ಬೆಳೆಸಿದ ಉತ್ತಮ ಬಾಂಧವ್ಯವನ್ನು ಸ್ಮರಿಸಿದರು.
ಅಮೂಲ್ಯ ಅಧ್ಯಾಯ
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುರೇಶ ಎನ್. ಅವರು ತಮ್ಮ 37 ವರ್ಷಗಳ ಸೇವಾ ಪಯಣವನ್ನು ಸ್ಮರಿಸಿಕೊಂಡು, ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ನೀಡಿದ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಸಹಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅವಕಾಶವು ತಮ್ಮ ಜೀವನದ ಅತ್ಯಂತ ಅಮೂಲ್ಯ ಅಧ್ಯಾಯವಾಗಿದ್ದು, ಸಂಸ್ಥೆಯೊಂದಿಗೆ ಹೊಂದಿರುವ ಬಾಂಧವ್ಯ ಸದಾ ಮುಂದುವರಿಯಲಿದೆ ಎಂದು ಭಾವುಕರಾಗಿ ನುಡಿದರು.
ಕಾರ್ಯಕ್ರಮದಲ್ಲಿ ಸುರೇಶ ಎನ್. ಅವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಸಿಬ್ಬಂದಿ ವರ್ಗವು ನಿವೃತ್ತ ಜೀವನಕ್ಕೆ ಶುಭ ಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಸನ್ನ ಕುಮಾರ್ ವೈ.ಟಿ. ಪ್ರಾರ್ಥನೆ ನೆರವೇರಿಸಿದರು. ಸತೀಶ್ ಸ್ವಾಗತಿಸಿದರು. ಪದ್ಮಪ್ರಸಾದ್ ಬಿ. ಕಾರ್ಯಕ್ರಮವನ್ನು ನಿರೂಪಿಸಿದರು. ರಾಮಚಂದ್ರ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



