ನಾರೀ ಶಕ್ತಿಯಿಂದ ಸಮಾಜದ ಉದ್ಧಾರ: ಡಾ. ಮಧುಮಾಲ
ಹೊಸಂಗಡಿ: ಮಹಿಳೆಯರು ಸಮಾಜದ ನಿಜವಾದ ಶಕ್ತಿ. ಅವರು ತಮ್ಮ ಜವಾಬ್ದಾರಿಯನ್ನು ಅರಿತು ಪ್ರಬುದ್ಧತೆಯಿಂದ ಹೆಜ್ಜೆ ಇಟ್ಟರೆ ಮಾತ್ರ ಕುಟುಂಬ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜು ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಕೆ. ಅಭಿಪ್ರಾಯ ಪಟ್ಟರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಬಿಸಿ ಟ್ರಸ್ಟ್ ಗುರುವಾಯನಕೆರೆ, ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಹೊಸಂಗಡಿ, ಪ್ರಗತಿಬಂಧು ಸ್ವಸಹಾಯ ಜ್ಞಾನ ವಿಕಾಸ ಸಂಘಗಳ ಒಕ್ಕೂಟ ಹೊಸಂಗಡಿ ಇದರ ಆಶ್ರಯದಲ್ಲಿ ಊರವರ ಸಹಕಾರದೊಂದಿಗೆ ಪೆರಿಂಜೆ ಪಡ್ಡ್ಯಾರಬೆಟ್ಟದ ಶ್ರೀ ಸಂತೃಪ್ತಿ ಸಭಾಭವನದಲ್ಲಿ ಇಂದು ನಡೆದ ೨೩ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆಯು ಧಾರ್ಮಿಕಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಪೋಷಕರು ಎಚ್ಚೆತ್ತುಕೊಳ್ಳಬೇಕು
ಕುಟುಂಬದೊಳಗೆ ಸಂಬಂಧಗಳು ಅಳಿದುಹೋಗುತ್ತಿರುವುದೇ ಇಂದಿನ ಅಪರಾಧಗಳ ಹೆಚ್ಚಳಕ್ಕೆ ನೇರ ಕಾರಣ. ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಸಿಗುವಂತೆ ನೋಡಿಕೊಳ್ಳುವಲ್ಲಿ ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ. ಜೊತೆಗೆ ಯುವ ಜನತೆಯನ್ನು ಮಾದಕ ವ್ಯಸನಗಳ ಕಪಿಮುಷ್ಠಿಯಿಂದ ಪಾರು ಮಾಡಲು ಸಂಘ-ಸಂಸ್ಥೆಗಳು ದುಶ್ಚಟಗಳ ವಿರುದ್ಧ ದಿಟ್ಟ ಹೋರಾಟ ನಡೆಸಬೇಕಿದೆ ಎಂದು ಮಧುಮಾಲ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಪದ್ಮ ಕ್ಯಾಶ್ಯೂ ಇಂಡಸ್ಟ್ರೀಸ್ ನ ಮಾಲಕರಾದ ವಿಕಾಸ್ ಜೈನ್ ಬಾಲ್ನಗುತ್ತು ಅವರು ವಹಿಸಿದ್ದು, ಪೂಜಾ ಕೈಂಕರ್ಯದಿಂದ ಸಮಾಜಕ್ಕೆ ಒಳಿತಾಗಲಿ ಎಂದರು.
ಮಕ್ಕಳ ಹೆಜ್ಜೆಗಳ ಮೇಲೆ ಕಣ್ಣಿಡಿ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಹರೀಶ್ ಆರ್.ಎಸ್., ಅವರು ಮಾತನಾಡಿ, ಬಾಲ್ಯ ಮತ್ತು ಹದಿಹರೆಯದ ಹಂತದಲ್ಲೇ ಇಂದಿನ ಯುವ ಪೀಳಿಗೆಯು ಅಡೇಹಾದಿ ತುಳಿದು ದಾರಿ ತಪ್ಪುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ತಂತ್ರಜ್ಞಾನದ ಭರಾಟೆ ಮತ್ತು ಮೌಲ್ಯಗಳ ಕುಸಿತದ ಈ ಕಾಲಘಟ್ಟದಲ್ಲಿ ಮಕ್ಕಳ ಹೆಜ್ಜೆಗಳ ಮೇಲೆ ಕಣ್ಣಿಡಬೇಕಾದ ಪೋಷಕರು ಮತ್ತು ಹಿರಿಯರು ಗಂಭೀರವಾಗಿ ಎಚ್ಚೆತ್ತುಕೊಳ್ಳಬೇಕಾದ ತುರ್ತು ಅವಶ್ಯಕತೆಯಿದೆ ಎಂದರು.
ಹೊಸಂಗಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಆನಂದ ಬಂಗೇರ, ವರಮಹಾಲಕ್ಷ್ಮಿ ಪೂಜಾ ಸಮಿತಿ ಇದರ ಅಧ್ಯಕ್ಷೆ ಶ್ರೀಮತಿ ವೇದಾವತಿ, ಕಾರ್ಯದರ್ಶಿ ಸುಮಿತ್ರಾ, ಕೋಶಾಧಿಕಾರಿ ಮೀನಾಕ್ಷಿ, ಒಕ್ಕೂಟದ ಅಧ್ಯಕ್ಷರುಗಳಾದ ರೋಹಿತ್ ಹಾಗೂ ದಿನಕರ ಉಪಸ್ಥಿತರಿದ್ದರು.
ಕು. ಅಶ್ವಿಜಾ ಬಳಗ ಪ್ರಾರ್ಥಿಸಿದರು. ಸೇವಾಪ್ರತಿನಿಧಿ ಶ್ರೀಮತಿ ಸೌಮ್ಯ ವರದಿ ವಾಚಿಸಿದರು. ಸೇವಾಪ್ರತಿನಿಧಿ ಶ್ರೀಮತಿ ಪ್ರತಿಭಾ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಂದೇಶ ವಾಚಿಸಿದರು. ಸೇವಾಪ್ರತಿನಿಧಿ ಹರೀಶ್ ಪೂಜಾರಿ ಬಾಡಾರು ಕಾರ್ಯಕ್ರಮ ಸಂಯೋಜಿಸಿ, ಸ್ವಾಗತಿಸಿದರು. ವಿಎಲ್ಇ ವಿಜಯಲಕ್ಷ್ಮೀ ವಂದಿಸಿದರು. ಮೋಹನಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ದೇವಿಯ ಮೂರ್ತಿಯನ್ನು ಅಲಂಕಾರ ಮಾಡಿದ ವೇಣೂರು ಪವಿ ಬ್ಯೂಟಿ ಸೆಲೂನ್ ಮಾಲಕಿ ಪ್ರಮೀಳಾ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಂಸ್ಕಾರದ ಅಡಿಪಾಯ ಗಟ್ಟಿಯಾಗಬೇಕು
ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತುವಲ್ಲಿ ಪೋಷಕರ ಜವಾಬ್ದಾರಿ ದೊಡ್ಡದಿದ್ದು, ಕುಟುಂಬ ವ್ಯವಸ್ಥೆಯಲ್ಲಿ ಬಾಂಧವ್ಯಗಳು ಸಡಿಲಗೊಳ್ಳುತ್ತಿರುವುದರಿಂದಲೇ ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಮನೆಯಲ್ಲಿ ಜೀವನ ಮೌಲ್ಯ, ಸಂಸ್ಕಾರದ ಅಡಿಪಾಯ ಗಟ್ಟಿಯಾಗಬೇಕು.
– ಡಾ. ಮಧುಮಾಲ ಕೆ., ಆಳ್ವಾಸ್ ಕಾಲೇಜು ಮೂಡಬಿದಿರೆ



