ಇತ್ತೀಚಿನ ದಿನಗಳಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳು ಮಿತಿಮೀರುತ್ತಿರುವುದು ಸಾರ್ವಜನಿಕರ ತಾಳ್ಮೆ ಗೆಡಿಸುತ್ತಿದೆ. ಜನಪ್ರತಿನಿಧಿಗಳು ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣ ಲೂಟಿ ಮಾಡುತ್ತಿದ್ದರೂ ಕಾನೂನು ಪ್ರಕ್ರಿಯೆಗಳು ವಿಳಂಬವಾಗುತ್ತಿರುವ ಹಿನ್ನೆಲೆ ಈಗ ಸಾರ್ವಜನಿಕರೇ ನೇರವಾಗಿ ಬೀದಿಗಿಳಿದು ಭ್ರಷ್ಟ ನಾಯಕರಿಗೆ ಸ್ಥಳದಲ್ಲೇ ಪಾಠ ಕಲಿಸಲು ಮುಂದಾಗುತ್ತಿದ್ದಾರೆ. ಇಂತಹದೇ ಒಂದು ಆಘಾತಕಾರಿ ಭ್ರಷ್ಟಾಚಾರದ ವಿರುದ್ಧದ ಜನಾಕ್ರೋಶದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ವರದಿಯಾಗಿದೆ.
ಕೆರಳಿದ ಜನರಿಂದ ಚಪ್ಪಲಿ ಹಾರ
ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹಿರಿಯ ನಾಯಕ ಹಾಗೂ ತಾರಕೇಶ್ವರ ಮುನ್ಸಿಪಾಲಿಟಿಯ ಮಾಜಿ ಅಧ್ಯಕ್ಷ ಸ್ವಪನ್ ಸಮಂತಾ ಅವರ ಭ್ರಷ್ಟಾಚಾರದಿಂದ ಬೇಸತ್ತಿದ್ದ ಸ್ಥಳೀಯ ನಿವಾಸಿಗಳು, ಅವರನ್ನು ಸಾರ್ವಜನಿಕವಾಗಿ ತೀವ್ರವಾಗಿ ಅವಮಾನಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಎಎನ್ಐ ವರದಿ ಮಾಡಿರುವ ಪ್ರಕಾರ, ಸ್ವಪನ್ ಸಮಂತಾ ವಿರುದ್ಧ ದೀರ್ಘಕಾಲದಿಂದಲೂ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ವ್ಯಾಪಕ ಅಕ್ರಮ ಎಸಗಿರುವ ಮತ್ತು ಭ್ರಷ್ಟಾಚಾರ ನಡೆಸಿರುವ ಗಂಭೀರ ಆರೋಪಗಳು ಕೇಳಿಬಂದಿದ್ದವು. ಇದರಿಂದ ಕೆರಳಿದ ಸ್ಥಳೀಯ ನಿವಾಸಿಗಳ ಗುಂಪು ಮಾಜಿ ಮುನ್ಸಿಪಾಲಿಟಿ ಅಧ್ಯಕ್ಷರನ್ನು ಸುತ್ತುವರಿದು, ಅವರಿಗೆ ಚಪ್ಪಲಿಗಳಿಂದ ಮಾಡಿದ ಹಾರ ಹಾಕಿ ಇಡೀ ಪ್ರದೇಶದಲ್ಲಿ ಮೆರವಣಿಗೆ ಮಾಡಿದೆ.
ಕಿವಿ ಹಿಡಿದು ಬಸ್ಕಿ ಹೊಡೆಸಿದ ಸಾರ್ವಜನಿಕರು
ಲೂಟಿಯ ವಿರುದ್ಧ ಕೇವಲ ಘೋಷಣೆಗಳನ್ನು ಕೂಗುವುದಕ್ಕಷ್ಟೇ ಸೀಮಿತವಾಗದ ಪ್ರತಿಭಟನಾಕಾರರು, ನಾಯಕನಿಗೆ ಸಾರ್ವಜನಿಕವಾಗಿ ತಪ್ಪು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇಡೀ ಸಾರ್ವಜನಿಕರ ಸಮ್ಮುಖದಲ್ಲೇ ಟಿಎಂಸಿ ನಾಯಕನಿಗೆ ಕಿವಿ ಹಿಡಿದುಕೊಂಡು ಬಸ್ಕಿ ಹೊಡೆಯುವಂತೆ ಮಾಡಿ ಶಿಕ್ಷಿಸಿದ್ದಾರೆ.
ಮೊಟ್ಟೆ, ಟೊಮೆಟೊ ಎಸೆತ-ವಿಡಿಯೋ ವೈರಲ್
ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ನೆರೆದಿದ್ದ ಜನರು ಭ್ರಷ್ಟಾಚಾರದ ವಿರುದ್ಧ ಆಕ್ರೋಶದ ಘೋಷಣೆಗಳನ್ನು ಕೂಗುತ್ತಾ ನಾಯಕನ ಮೇಲೆ ಮೊಟ್ಟೆ ಮತ್ತು ಟೊಮೆಟೊಗಳನ್ನು ಎಸೆದಿದ್ದಾರೆ. ಈ ಇಡೀ ಘಟನೆಯ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ ಉದ್ರಿಕ್ತ ಜನರು ಆತನನ್ನು ಸುತ್ತುವರಿದು ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಮಿತಿಮೀರುತ್ತಿರುವ ಭ್ರಷ್ಟಾಚಾರ ಮತ್ತು ಸ್ವಪಕ್ಷದ ಹಿರಿಯ ನಾಯಕನಿಗೆ ಸಾರ್ವಜನಿಕರು ಬೀದಿಯಲ್ಲೇ ಶಿಕ್ಷೆ ನೀಡಿರುವ ಈ ಮುಜುಗರದ ಘಟನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (TMC) ಪಕ್ಷವು ಈವರೆಗೆ ಯಾವುದೇ ಅಧಿಕೃತ ಅಥವಾ ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಆದರೆ ಎದುರಾಳಿ ಪಕ್ಷಗಳು ಈ ಘಟನೆ ಮುಂದಿಟ್ಟುಕೊಂಡು ಪಶ್ಚಿಮ ಬಂಗಾಳದಾದ್ಯಂತ ತೃಣಮೂಲ ಕಾಂಗ್ರೆಸ್ನ ಭ್ರಷ್ಟಾಚಾರದ ಮಿತಿ ಎಷ್ಟು ತಲುಪಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ವಾಗ್ದಾಳಿ ನಡೆಸುತ್ತಿವೆ.
ಸ್ಥಳೀಯ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು ಮಂಜೂರು ಮಾಡಲು ಸ್ವಪನ್ ಸಮಂತಾ ಸಾರ್ವಜನಿಕರಿಂದ ಭಾರಿ ಪ್ರಮಾಣದ ಲಂಚ ವಸೂಲಿ ಮಾಡಿದ್ದರು ಎಂಬ ಗಂಭೀರ ಆರೋಪವಿದೆ. ಹಣ ನೀಡಿದರೂ ಮನೆ ಸಿಗದಿದ್ದಾಗ ಮತ್ತು ಹಣವನ್ನು ವಾಪಸ್ ಕೇಳಿದಾಗ ಉಡಾಫೆ ಉತ್ತರ ನೀಡಿದ್ದರಿಂದ ಸಾರ್ವಜನಿಕರ ತಾಳ್ಮೆ ಮೀರಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕರೇ ಕಾನೂನನ್ನು ಕೈಗೆತ್ತಿಕೊಂಡು ಸ್ಥಳದಲ್ಲೇ ಶಿಕ್ಷೆ ವಿಧಿಸುವ ಘಟನೆಗಳು ಹೆಚ್ಚಾಗುತ್ತಿವೆ. ಈ ಹಿಂದೆಯೂ ತೃಣಮೂಲ ಕಾಂಗ್ರೆಸ್ನ ಕೆಲವು ಸ್ಥಳೀಯ ಮುಖಂಡರ ವಿರುದ್ಧ ಇಂತಹದೇ ಜನಾಕ್ರೋಶ ವ್ಯಕ್ತವಾಗಿತ್ತು. ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಂಡಾಗ ಜನರು ಈ ರೀತಿಯ ತೀವ್ರ ಸ್ವರೂಪದ ಹಲ್ಲೆಗೆ ಮುಂದಾಗುತ್ತಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಶ್ಚಿಮ ಬಂಗಾಳದ ಇತರೆ ಪಕ್ಷಗಳು ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಅನೇಕರು ವ್ಯವಸ್ಥೆ ಕೆಟ್ಟಾಗ ಸಾರ್ವಜನಿಕರಿಗೆ ಇದೊಂದೇ ದಾರಿ ಎಂದು ಈ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ.



