ಭಾರತದ ಬಹುತೇಕ ಎಲ್ಲ ನಗರಗಳಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆಯಿಂದ ಹೋಟೆಲ್, ರೆಸ್ಟೋರೆಂಟ್, ಹಾಸ್ಟೆಲ್, ಪಿಜಿಗಳು ಬಾಗಿಲು ಮುಚ್ಚುತ್ತಿವೆ. ಕೊವಿಡ್-19 ವೇಳೆ ಉಂಟಾಗಿದ್ದ ಪರಿಸ್ಥಿತಿಯೇ ನಗರಗಳಲ್ಲಿ ಮತ್ತೆ ಮರುಕಳಿಸುತ್ತಿದೆ. ಹೋಟೆಲ್ಗಳಲ್ಲಿ ಊಟ ಸಿಗದೆ ಅನೇಕ ಜನರು ಪರದಾಡುತ್ತಿದ್ದಾರೆ. ಹಾಸ್ಟೆಲ್ಗಳ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತಿದೆ. ನಿಮಗೇನಾದರೂ ‘ನಾಳೆ ಎಲ್ಪಿಜಿ ಡೆಲಿವರಿಗೆ ಈಗಲೇ ಹಣ ಪಾವತಿಸಿ’ ಎಂಬ ಜಾಹೀರಾತು ಅಥವಾ ಮೆಸೇಜ್ ಬರುತ್ತಿದ್ದರೆ ಯಾಮಾರಬೇಡಿ ಎಚ್ಚರ!
ಇಂಧನ ಪೂರೈಕೆಯಲ್ಲಿನ ಕೊರತೆಯ ಭಯದ ನಡುವೆ ಭಾರತದ ಹಲವಾರು ಭಾಗಗಳಲ್ಲಿ LPG ಸಿಲಿಂಡರ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಪರದೆ ಮೇಲೆ ‘ತಕ್ಷಣದ ಎಲ್ಪಿಜಿ ಡೆಲಿವರಿಗೆ ಈಗಲೇ ಹಣ ಪಾವತಿಸಿ’ ಎಂಬ ಜಾಹೀರಾತು ಬಂದರೆ ಅದನ್ನು ನಂಬಬೇಡಿ.
ಎಲ್ಪಿಜಿ ಸಿಲಿಂಡರ್ ಬುಕ್ ಮಾಡಲು ಜನರು ಪರದಾಡುತ್ತಿರುವಾಗ ಸೈಬರ್ ಅಪರಾಧಿಗಳು ಇದನ್ನೇ ಬಂಡವಾಳ ಮಾಡಿಕೊಂಡು ತಾವು ಲಾಭ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸೈಬರ್ ಅಪರಾಧಿಗಳು LPG ಸಿಲಿಂಡರ್ ರೀಫಿಲ್ಲಿಂಗ್ಗೆ ಹುಡುಕುತ್ತಿರುವ ಜನರನ್ನು ಗುರಿಯಾಗಿಸಿಕೊಂಡು ಹೊಸ ರೀತಿಯ ವಂಚನೆಗಳನ್ನು ಪ್ರಾರಂಭಿಸಲು ಪ್ರಾರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಪಿಜಿ ಸಿಲಿಂಡರ್ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಮತ್ತು ಪೂರೈಕೆ ಕಡಿಮೆಯಾಗುತ್ತಿದೆ. ಈ ಬಗ್ಗೆ ವದಂತಿಗಳು ಆನ್ಲೈನ್ನಲ್ಲಿ ಹರಡುತ್ತಿರುವುದರಿಂದ, ಸೈಬರ್ ಅಪರಾಧಿಗಳು ಜನರ ಭಯದ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಸೈಬರ್ ಅಪರಾಧಿಗಳು ಗ್ಯಾಸ್ ಬುಕಿಂಗ್ ಸೇವೆಗಳಿಗಾಗಿ ಆನ್ಲೈನ್ನಲ್ಲಿ ಹುಡುಕುವ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ದಾರಿತಪ್ಪಿಸುವ ಜಾಹೀರಾತುಗಳು ಸೋಷಿಯಲ್ ಮೀಡಿಯಾ ಮತ್ತು ಮೆಸೇಜ್ ಅಪ್ಲಿಕೇಶನ್ಗಳಲ್ಲಿ ಪ್ರಸಾರವಾಗಲು ಪ್ರಾರಂಭಿಸಿವೆ. ಈ ನಕಲಿ ಪ್ರಚಾರಗಳು ವೇಗವಾಗಿ LPG ಸಿಲಿಂಡರ್ ವಿತರಣೆಯನ್ನು ನೀಡುವುದಾಗಿ ನಂಬಿಸುತ್ತಿವೆ. ತಕ್ಷಣ ಗ್ಯಾಸ್ ಸಿಲಿಂಡರ್ ಕೊಡುತ್ತೇವೆ, ಹೆಚ್ಚಿನ ಸಿಲಿಂಡರ್ ಕೊಡುತ್ತೇವೆ ಎಂಬ ಆಮಿಷವೊಡ್ಡಿ ಗ್ರಾಹಕರನ್ನು ಸುಲಿಗೆ ಮಾಡುವ ಜಾಲ ಸೃಷ್ಟಿಯಾಗಿದೆ. ಇಂತಹ ಮೋಸಗೊಳಿಸುವ ಪ್ರಚಾರಗಳನ್ನು ಸಾಮಾನ್ಯವಾಗಿ WhatsApp ಫಾರ್ವರ್ಡ್ಗಳು, SMS ಸಂದೇಶಗಳು ಮತ್ತು ಇತರ ಮೆಸೇಜಿಂಗ್ ವೇದಿಕೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ.
ಈ ಸಂದೇಶಗಳು ಸಾಮಾನ್ಯವಾಗಿ ಕಾನೂನುಬದ್ಧ ಗ್ಯಾಸ್ ಬುಕಿಂಗ್ ಪೋರ್ಟಲ್ಗಳನ್ನೇ ಹೋಲುವ ನಕಲಿ ವೆಬ್ಸೈಟ್ಗಳಿಗೆ ಲಿಂಕ್ಗಳನ್ನು ಹೊಂದಿರುತ್ತವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಇವರು ಸಾಮಾನ್ಯವಾಗಿ ತಕ್ಷಣದ ಸಿಲಿಂಡರ್ ವಿತರಣೆಗೆ ಆನ್ಲೈನ್ನಲ್ಲಿ ಮುಂಗಡ ಪಾವತಿ ಮಾಡಲು ಕೇಳುತ್ತಾರೆ. ನೀವೇನಾದರೂ ಪ್ರಿ ಬುಕಿಂಗ್ಗೆ ಹಣ ಪಾವತಿ ಮಾಡಿದರೆ ನೀವು ಮೋಸ ಹೋಗುವುದು ಗ್ಯಾರಂಟಿ. ಹೀಗಾಗಿ, ಅಧಿಕೃತ ವೆಬ್ಸೈಟ್ ಅನ್ನು ಹೊರತುಪಡಿಸಿ ಬೇರಾವುದೇ ಸೈಟ್ಗಳಲ್ಲೂ ಮುಂಗಡ ಹಣ ಪಾವತಿ ಮಾಡಿ ಸಿಲಿಂಡರ್ ಬುಕ್ ಮಾಡುವುದು ಸುರಕ್ಷಿತವಲ್ಲ.
ಯಾವುದೇ ಕಾರಣಕ್ಕೂ ಬ್ಯಾಂಕ್ ಅಕೌಂಟ್, OTP, UPI ಪಿನ್ಗಳು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಅಥವಾ ಬೇರೆ ಯಾವುದೇ ಇತರ ಗೌಪ್ಯ ಡೇಟಾದಂತಹ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ. ಇಂತಹ ವಂಚನೆಗಳು ನಿಮಗೂ ಉಂಟಾದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂತಹ ವಂಚನೆಗಳಿಗೆ ಬಲಿಯಾದವರು ತಕ್ಷಣ ರಿಪೋರ್ಟ್ ಮಾಡುವುದರಿಂದ ಕೆಲವೊಮ್ಮೆ ಹೆಚ್ಚಿನ ಆರ್ಥಿಕ ನಷ್ಟವನ್ನು ತಡೆಗಟ್ಟಲು ಮತ್ತು ಭಾಗಿಯಾಗಿರುವ ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ತನಿಖಾಧಿಕಾರಿಗಳಿಗೆ ಸಹಾಯವಾಗುತ್ತದೆ.
ಸೈಬರ್ ವಂಚನೆ ದೂರುಗಳಿಗೆ ಪ್ರತಿಕ್ರಿಯಿಸಲು ಮತ್ತು ತಕ್ಷಣದ ಸಹಾಯವನ್ನು ಒದಗಿಸಲು ಸ್ಥಾಪಿಸಲಾದ 1930ಗೆ ಕರೆ ಮಾಡುವ ಮೂಲಕ ವಂಚನೆಗೆ ಒಳಗಾದವರು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಭಾರತ ಸರ್ಕಾರದ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮೂಲಕವೂ ದೂರುಗಳನ್ನು ನೋಂದಾಯಿಸಬಹುದು.





