ಮಂಗಳೂರು, ಫೆ.25: ನಗರದ ಕದ್ರಿ ದೇವಸ್ಥಾನ ಬಳಿಯ ಡಾಕ್ಟರ್ಸ್ ಕಾಲನಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ಫೆ.23ರ ಸೋಮವಾರ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಚಿರತೆ ಬಂದಿದ್ದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಡಾಕ್ಟರ್ಸ್ ಕಾಲನಿ ಗೇಟ್ ಮುಂಭಾಗದಲ್ಲಿ ಚಿರತೆ ಅಡ್ಡಾಡುವುದು ಅಲ್ಲಿರುವ ಎರಡು ಸಿಸಿಟಿವಿಗಳಲ್ಲಿ ದಾಖಲಾಗಿದೆ. ಕದ್ರಿ ದೇವಸ್ಥಾನ ಮೇಲ್ಬಾಗದಲ್ಲಿ ಸ್ವಲ್ಪ ಕಾಡು ಹೊಂದಿದ್ದು ಬಿಟ್ಟರೆ ಉಳಿದೆಲ್ಲ ಕಡೆ ಕಾಂಕ್ರೀಟ್ ಕಾಡು ಮಾತ್ರ ಇದೆ. ಇದಲ್ಲದೆ, ದೊಡ್ಡ ಅಪಾರ್ಟೆಂಟ್ ಗಳು, ವಿಲ್ಲಾ ರೀತಿಯ ಮನೆಗಳು ಮಾತ್ರ ಇರುವುದರಿಂದ ಚಿರತೆಗೆ ಇಲ್ಲಿ ತಿನ್ನುವುದಕ್ಕೂ ಏನೂ ಸಿಗಲಿಕ್ಕಿಲ್ಲ. ಇಂಥ ಜಾಗದಲ್ಲಿ ಚಿರತೆ ಕಾಣಿಸಿದ್ದು ಸ್ಥಳೀಯರನ್ನು ಅಚ್ಚರಿಗೊಳಿಸಿದೆ.
ಎರಡು ವರ್ಷಗಳ ಹಿಂದೆ ಇದೇ ಜಾಗದಲ್ಲಿ ಕಾಡು ಕೋಣ ಪತ್ತೆಯಾಗಿತ್ತು. ಬಳಿಕ ಅದನ್ನು ಶಕ್ತಿನಗರದ ಮೂಲಕ ಮರಳಿ ಕಾಡಿಗೆ ಅಟ್ಟಲಾಗಿತ್ತು. ವಾರದ ಹಿಂದೆ ಶಕ್ತಿನಗರ ಭಾಗದಲ್ಲಿ ಸಣ್ಣದಾದ ಚಿರತೆ ಕಾಣಿಸಿಕೊಂಡಿದ್ದು ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು. ಇದೀಗ ಕದ್ರಿ ಬಳಿಯಲ್ಲಿ ದೊಡ್ಡ ಮಾದರಿಯ ಚಿರತೆ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದೆ. ಆದರೆ ಯಾರಿಗೂ ನೇರವಾಗಿ ದರ್ಶನಕ್ಕೆ ಸಿಕ್ಕಿಲ್ಲ. ಹೀಗಾಗಿ ಅರಣ್ಯ ಇಲಾಖೆಯವರಿಗೂ ದೂರು ಹೋಗಿಲ್ಲ.
ಸಾಮಾನ್ಯವಾಗಿ ಜನವರಿ, ಫೆಬ್ರವರಿ ತಿಂಗಳಲ್ಲಿ ಆಹಾರ ಅರಸಿಕೊಂಡು ಚಿರತೆಗಳು ನಾಡಿಗೆ ಬರುತ್ತವೆ. ಕಾಡಂಚಿನ ಭಾಗದಲ್ಲಿ ಕೋಳಿ, ನಾಯಿಗಳನ್ನು ಹೊತ್ತೊಯ್ದು ತಿನ್ನುತ್ತವೆ. ಬಜೈ ಎಡಪದವು, ನೀರುಮಾರ್ಗ ಭಾಗದಲ್ಲಿ ಚಿರತೆ ಸಾಮಾನ್ಯವಾಗಿದ್ದರೂ ಈ ಬಾರಿ ಆಗಿಂದಾಗ್ಗೆ ನಗರ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಸಮಯದಲ್ಲಿ ಚಿರತೆಗಳ ಓಡಾಟ ಸಾಮಾನ್ಯ ಮತ್ತು ಒಂದು ರಾತ್ರಿಯಲ್ಲಿ ಅವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕನಿಷ್ಠ 15 -20 ಕಿಮೀ ಓಡಾಡುತ್ತವೆ. ಹೀಗಾಗಿ ತಿನ್ನಲು ಸಿಗದ ಜಾಗದಲ್ಲಿ ಒಂದೇ ಕಡೆ ಇರುತ್ತವೆ, ನಿಲ್ಲುತ್ತವೆ ಎನ್ನುವುದಕ್ಕಾಗಲ್ಲ ಎಂದು ಹೇಳುತ್ತಾರೆ.





