ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಮೇಷ ಸಂಕ್ರಮಣವಾದ ಇಂದು ಚಾಲನೆ ದೊರೆಯಿತು.
ಬೆಳಿಗ್ಗೆ ತೋರಣ ಮುಹೂರ್ತ ನಡೆದು ಧ್ವಜಾರೋಹಣ ನೆರವೇರುವ ಮೂಲಕ ಒಂಭತ್ತು ದಿನಗಳ ಜಾತ್ರಾ ಮಹೋತ್ಸವ ವಿಧಿ ವಿಧಾನಕ್ಕೆ ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯರವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಮಧ್ಯಾಹ್ನ ಮಹಾಪೂಜೆ ನೆರವೇರಿದ್ದು, ನೂರಾರು ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ್ ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು. ಸಮಿತಿ ಸದಸ್ಯರು ಸಹಕರಿಸಿದರು.

ಜಾತ್ರಾ ದಿನಗಳಂದು ಶ್ರೀ ದೇವರಿಗೆ ವಿಶೇಷ ಪೂಜೆ, ಭಜನೆ, ಉತ್ಸವ, ಮಹಾಪೂಜೆ, ನಿತ್ಯಬಲಿ ನಡೆಯಲಿದೆ. ಎ. 19ರಂದು ರಾತ್ರಿ ರಕ್ತೇಶ್ವರಿ ದೈವದ ನೇಮ ನಡೆಯಲಿದೆ. ಎ. 20ರಂದು ರಾತ್ರಿ ದರ್ಶನ ಬಲಿ, ಕಲ್ಕುಡ-ಕಲ್ಲುರ್ಟಿ ದೈವಗಳ ನೇಮ ನಡೆಯಲಿದೆ. ಎ. 22ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಚೂರ್ಣೋತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ಕೊಡಮಣಿತ್ತಾಯ ದೈವದ ನೇಮ, ಉತ್ಸವ ಹಾಗೂ ಮಹಾ ರಥೋತ್ಸವ ನಡೆಯಲಿದೆ. ಎ.23ರಂದು ರಾತ್ರಿ ಅಂಗಣ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ. ಎ. 25ರಂದು ಶ್ರೀ ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ ಜರಗಲಿದೆ.
ಹಸಿರುವಾಣಿ ಹೊರೆಕಾಣಿಕೆ
ಜಾತ್ರಾ ಸಂದರ್ಭದಲ್ಲಿ ಪ್ರತೀ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದ್ದು, ಎ. ೧೩ರಿಂದ ೨೧ರವರೆಗೆ ಭಕ್ತರು ಹಸಿರುವಾಣಿ ಹೊರೆಕಾಣಿಕೆಯನ್ನು ಕ್ಷೇತ್ರಕ್ಕೆ ಸಮರ್ಪಿಸಬಹುದಾಗಿದೆ.





