ತಮ್ಮ ಭವಿಷ್ಯ ರೂಪಿಸುವತ್ತ ಗಮನ ನೀಡಬೇಕು; SKDRDP ಯೋಜನಾಧಿಕಾರಿ ಹರೀಶ್ ಆರ್.ಎಸ್.
ವೇಣೂರು: ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಯುವ ಪೀಳಿಗೆ ಇಂತಹ ಯಾವುದೇ ಕೆಟ್ಟ ಚಟಗಳಿಗೆ ಮಾರುಹೋಗದೇ ತಮ್ಮ ಭವಿಷ್ಯ ರೂಪಿಸುವತ್ತ ಗಮನ ನೀಡಬೇಕು, ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತ ಬಂದಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾಧಿಕಾರಿ ಹರೀಶ್ ಆರ್.ಎಸ್. ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಬಿಸಿ ಟ್ರಸ್ಟ್ ಗುರುವಾಯನಕೆರೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಆಶ್ರಯದಲ್ಲಿ ವೇಣೂರು ನಿಟ್ಟಡೆಯ ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆ ನಡೆದ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಪ್ರಯುಕ್ತ ಧರ್ಮಸ್ಥಳದಿಂದ ಜಾಗೃತಿ ಆನ್ಲೈನ್ ವೀಕ್ಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇದರ ಅಧ್ಯಕ್ಷರಾದ ಗಿರೀಶ್ ಕೆ.ಎಸ್. ಅವರು ಮಾತನಾಡಿ, ಧರ್ಮಸ್ಥಳದ ಜನಜಾಗೃತಿ ವೇದಿಕೆ ದುಷ್ಚಟಗಳ ವಿರುದ್ಧ ಹೋರಾಟ ಮಾಡುತ್ತಲೇ ಬರುತ್ತಿದೆ. ವಿದ್ಯಾರ್ಥಿ ಜೀವನ ಚಿನ್ನದ ಜೀವನ ಆಗಿದೆ. ವಿದ್ಯಾರ್ಥಿಗಳು ಕೇವಲ ವಿದ್ಯಾರ್ಜನೆಗಷ್ಟೇ ಗಮನ ನೀಡಬೇಕು, ಜೀವನದಲ್ಲಿ ಏನಾದರೂ ಸಾಧನೆಗೈದು ಪೋಷಕರಿಗೆ ಕೀರ್ತಿ ತರಬೇಕು ಎಂದರು.
ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಓಮನಾ, ಧರ್ಮಸ್ಥಳ ಯೋಜನೆಯ ವಲಯ ಮೇಲ್ವಿಚಾರಕಿ ಸುಜಾತ, ಕುಂಭಶ್ರೀ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಶ್ರೀನಿವಾಸ್ ನಾಯಕ್, ನ್ಯೂಸ್ 19 ಕನ್ನಡ ಸಂಪಾದಕ ಪದ್ಮನಾಭ ಕುಲಾಲ್ ವೇಣೂರು, ಸೇವಾಪ್ರತಿನಿಧಿ ರೂಪಾ ಚಂದನ, ಪೊಲೀಸ್ ಸಿಬ್ಬಂದಿ ರೋಹಿನಾಥ್ ಉಪಸ್ಥಿತರಿದ್ದರು.
ಕುಂಭಶ್ರೀಯ ಶೈಕ್ಷಣಿಕ ಸಲಹೆಗಾರ ಮನೋಜ್ ಎಸ್. ಸ್ವಾಗತಿಸಿ, ಉಪನ್ಯಾಸಕಿ ಚರಣ್ಯ ನಿರೂಪಿಸಿದರು. ಉಪನ್ಯಾಸಕ ಅಭಿಲಾಷ್ ಕಾಮತ್ ವಂದಿಸಿದರು.
ಡಾ. ಹೆಗ್ಗಡೆಯವರ ಆಶಯದ ನುಡಿಗೆ ಕಿವಿಯಾದ ವಿದ್ಯಾರ್ಥಿಗಳು
ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಸಾಗಣಿಕೆ ವಿರೋಧಿ ದಿನದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಜನಜಾಗೃತಿ ವೇದಿಕೆ ಮೂಲಕ ಒಂದು ಯೋಜನಾ ಕಚೇರಿ ಮಟ್ಟದಲ್ಲಿ 4 ಹೈಸ್ಕೂಲ್, ಪದವಿಪೂರ್ವ/ಪದವಿ ಕಾಲೇಜುಗಳನ್ನು ಅಯ್ಕೆ ಮಾಡಿಸಿಕೊಂಡು ಏಕ ಕಾಲದಲ್ಲಿ ಆನ್ಲೈನ್ ವಿಸಿ ಮೂಲಕ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮ ಇದಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದ ನುಡಿ, ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರ ಹಾರೈಕೆಯ ಮಾತುಗಳ ಜೊತೆ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಎಸ್ಪಿ ಡಾ. ವೆಂಕಟೇಶ್ ಪ್ರಸನ್ನ ದುಷ್ಚಟಗಳ ಪರಿಣಾಮಗಳ ಬಗ್ಗೆ ಸವಿವರ ಮಾಹಿತಿ ನೀಡಿದರು.



