ಮೈಸೂರು, ಜು.10: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಆಚರಣೆಗೆ ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ಆರಂಭಿಸಿದೆ. ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಹತ್ವದ ದಸರಾ ಪೂರ್ವಸಿದ್ಧತಾ ಸಭೆ ನಡೆಯಿತು. ಸಭೆಯಲ್ಲಿ ದಸರಾ ಮಹೋತ್ಸವದ ದಿನಾಂಕವನ್ನು ಅಂತಿಮಗೊಳಿಸಲಾಗಿದ್ದು, ಅಕ್ಟೋಬರ್ 11ರ ಬೆಳಗ್ಗೆ 11.50ಕ್ಕೆ ದಸರಾ ಮಹೋತ್ಸವ ಉದ್ಘಾಟನೆಗೊಳ್ಳಲಿದ್ದು, ಅ. 21ರಂದು ಜಂಬೂಸವಾರಿ ನಡೆಯಲಿದೆ.
https://x.com/CMofKarnataka/status/2075527036245045366/photo/1?ref_src=twsrc%5Etfw%7Ctwcamp%5Etweetembed%7Ctwterm%5E2075527036245045366%7Ctwgr%5Eb43bcc9efb1376928307025ea105cf1caebc5398%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fmysuru%2Fmysuru-dasara-2026-inauguration-on-october-11-jumbo-savari-on-october-21-1210248.html
ದಸರಾ ಮಹೋತ್ಸವದ ವಿವರ ಹೀಗಿದೆ
- ಜುಲೈ 26: ದಸರಾ ಗಜಪಡೆಯ ‘ಗಜಪಯಣ’ ಅಧಿಕೃತವಾಗಿ ಆರಂಭವಾಗಲಿದೆ.
- ಆಗಸ್ಟ್ 26: ಮೈಸೂರು ಅರಮನೆಯ ಪ್ರವೇಶ ದ್ವಾರದಲ್ಲಿ ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾತ್ತದೆ.
- ಅಕ್ಟೋಬರ್ 11 (ಬೆಳಗ್ಗೆ 11.50): ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶುಭ ಧನುರ್ ಲಗ್ನದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದೆ.
- ಅಕ್ಟೋಬರ್ 21 (ವಿಜಯದಶಮಿ): ಅದ್ದೂರಿ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.
ಜಂಬೂಸವಾರಿಯ ಮುಹೂರ್ತದ ವಿವರ
ಅಕ್ಟೋಬರ್ 21ರ ಮಧ್ಯಾಹ್ನ 1.36ರಿಂದ 1.56ರ ನಡುವೆ: ಶುಭ ಮಕರ ಲಗ್ನದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಅದೇ ದಿನ ಸಂಜೆ 4.10ರಿಂದ 4.35ರ ಸಮಯದಲ್ಲಿ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿಗೆ ಸಿಎಂ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡಲಿದ್ದಾರೆ.
ದಸರಾ ವೇಳೆ 2 ದಿನಗಳ ಕಾಲ ಕಂಬಳ ಆಯೋಜನೆಗೆ ಮನವಿ
ಇನ್ನು ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಕಾಲ ಕಂಬಳ ಆಯೋಜಿಸಲು ಮತ್ತು ಇದಕ್ಕೆ ಪ್ರತ್ಯೇಕ ಅನುದಾನ ನೀಡುವಂತೆ ಕಂಬಳ ಸಮಿತಿ ಮನವಿ ಮಾಡಿದೆ.



