ಬೆಳ್ತಂಗಡಿ: ದೇಶದ ಜನತೆಗೆ “ಅಚ್ಚೆ ದಿನ” ಎಂಬ ಭರವಸೆಯನ್ನು ನೀಡಿದ್ದ ಕೇಂದ್ರ ಸರ್ಕಾರದ ಮೇಲೆ ಮತ್ತೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆ ಒಮ್ಮೆಲೆ 993 ಏರಿಕೆಯಾಗಿರುವುದು ಸಣ್ಣ ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳು ಮತ್ತು ಮಧ್ಯಮ ವರ್ಗದವರ ಮೇಲೆ ಕೇಂದ್ರ ಸರ್ಕಾರವು ಮರಣ ಶಾಸನವನ್ನು ಬರೆಯಲು ಹೊರಟಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಗೆ ಬಳಸುವ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ₹ 993ರವರೆಗೆ ಹೆಚ್ಚಿಸಿರುವುದು ದೇಶದ ಸಣ್ಣ ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳು ಹಾಗೂ ಮಧ್ಯಮ ವರ್ಗದ ಜನರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ನಿರ್ಧಾರವು ಈಗಾಗಲೇ ದುಬಾರಿಯಾಗುತ್ತಿರುವ ಜೀವನ ವೆಚ್ಚದ ನಡುವೆ ಜನತೆಗೆ ಮತ್ತೊಂದು ಆರ್ಥಿಕ ಹೊರೆ ಸೇರಿಸಿದೆ. ಹೋಟೆಲ್ಗಳು, ಕ್ಯಾಟರಿಂಗ್, ಟೀ ಅಂಗಡಿಗಳು, ಬೇಕರಿಗಳು ಮತ್ತು ಸಣ್ಣ ಮಟ್ಟದ ಆಹಾರ ವ್ಯಾಪಾರಿಗಳು ತಮ್ಮ ದೈನಂದಿನ ಕಾರ್ಯಾಚರಣೆಗೆ ಎಲ್ಪಿಜಿ ಸಿಲಿಂಡರ್ಗಳ ಮೇಲೆ ಅವಲಂಬಿತರಾಗಿದ್ದಾರೆ. ಬೆಲೆ ಏರಿಕೆಯ ಪರಿಣಾಮವಾಗಿ ಅವರು ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲು ಬಾಧ್ಯರಾಗುತ್ತಾರೆ. ಇದರಿಂದ ಅಂತಿಮವಾಗಿ ಸಾಮಾನ್ಯ ಗ್ರಾಹಕರೇ ಹೆಚ್ಚು ಹಣ ಕೊಟ್ಟು ಆಹಾರವನ್ನು ಖರೀದಿಸಬೇಕಾಗುತ್ತದೆ ಎಂದಿದ್ದಾರೆ.





