ಬೆಳ್ತಂಗಡಿ ( ಬಡಗಕಾರಂದೂರು): ಗ್ರಾಮೀಣ ಭಾಗದ ಶಾಲಾ ಮಕ್ಕಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಹುಟ್ಟುಹಾಕಿ, ಅವರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ (ACT) ಮತ್ತು ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್ ಸಹಯೋಗದಲ್ಲಿ ಆಯೋಜಿಸಲಾದ ‘ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ’ದ ಶಾಲಾ ಮಟ್ಟದ ಸ್ಪರ್ಧೆಯು ಆ. 14 ರಂದು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಬಡಗಕಾರಂದೂರು ಇಲ್ಲಿ ಯಶಸ್ವಿಯಾಗಿ ಜರುಗಿತು.


ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವನ ಜೀವನವನ್ನು ದಿನದಿಂದ ದಿನಕ್ಕೆ ಸುಲಭಗೊಳಿಸುತ್ತಿರುವ ಇಂದಿನ ಯುಗದಲ್ಲಿ, ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಆಯೋಜಿತವಾದ ‘ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ’ವು ವಿದ್ಯಾರ್ಥಿಗಳಿಗೆ ತಮ್ಮ ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯವನ್ನು ಅನಾವರಣಗೊಳಿಸಲು ಒಂದು ಅದ್ಭುತವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಿತು.
ಈ ಮೇಳದಲ್ಲಿ 68 ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು, ಒಟ್ಟು 34 ವಿನೂತನ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಅದ್ಭುತ ಪ್ರತಿಭೆಯನ್ನು ಸಾಬೀತುಪಡಿಸಿದರು. ಕೇವಲ ಕರಡು ಪಾಠಗಳಿಗೆ ಸೀಮಿತಗೊಳ್ಳದೆ, ತಾವು ಕಲಿತ ವಿಜ್ಞಾನದ ಸೂತ್ರಗಳನ್ನು ಪ್ರಾಯೋಗಿಕ ರೂಪಕ್ಕೆ ಇಳಿಸಿದ ಈ ವಿದ್ಯಾರ್ಥಿಗಳ ನಾವೀನ್ಯತೆ ಹಾಗೂ ಪರಿಶ್ರಮವು ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾಯಿತು. ಭವಿಷ್ಯದ ವಿಜ್ಞಾನಿಗಳನ್ನು ಮತ್ತು ತಂತ್ರಜ್ಞರನ್ನು ರೂಪಿಸುವಲ್ಲಿ ಇಂತಹ ಸ್ಪರ್ಧೆಗಳು ಪ್ರಮುಖ ಮೈಲಿಗಲ್ಲಾಗಿ ನಿಲ್ಲುತ್ತವೆ.
ಕಾರ್ಯಕ್ರಮದಲ್ಲಿ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ (ACT) ವತಿಯಿಂದ ತೀರ್ಪುಗಾರರಾಗಿ ಶ್ರೀ ಶ್ರೀವತ್ಸ, ಶ್ರೀ ಕೃಷ್ಣ ಮಡಿವಾಳ, ಕುಮಾರಿ ವೈಷ್ಣವಿ ಜಿ ಭಟ್ ಮತ್ತು ಕುಮಾರಿ ಶ್ರಾವ್ಯ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳು ತಯಾರಿಸಿದ ನವೀನ ಮಾದರಿಗಳನ್ನು ಮೌಲ್ಯಮಾಪನ ಮಾಡಿದರು.
ಬಹುಮಾನ ವಿತರಣೆ ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆ:
ಸ್ಪರ್ಧೆಯಲ್ಲಿ ವಿಜೇತರಾದ ಎರಡೂ ವಿಭಾಗದ ತಲಾ ಐದು ಅತ್ಯುತ್ತಮ ತಂಡಗಳಿಗೆ ಪ್ರಶಸ್ತಿಪತ್ರ ಸಹಿತ ಪುರಸ್ಕಾರ ನೀಡಲಾಯಿತು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. 1000, ದ್ವಿತೀಯ ಸ್ಥಾನಕ್ಕೆ ರೂ. 750 ಹಾಗೂ ತೃತೀಯ ಸ್ಥಾನಕ್ಕೆ ರೂ. 500 ನಗದು ಬಹುಮಾನ, ಮೆಡಲ್ ಬಹುಮಾನ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ನಾಲ್ಕು ಮತ್ತು ಐದನೇ ಸ್ಥಾನ ಪಡೆದ ತಂಡಗಳಿಗೆ ಸಮಾಧಾನಕರ ಬಹುಮಾನ, ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ತಂಡಗಳು ಮುಂಬರುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ.
ಶಿಕ್ಷಕರ ಮಾರ್ಗದರ್ಶನ ಮತ್ತು ಶ್ರಮ ಶ್ಲಾಘನೀಯ:
ವಿದ್ಯಾರ್ಥಿಗಳ ಈ ಅದ್ಭುತ ಸಾಧನೆ ಹಾಗೂ ನವೀನ ವಿಜ್ಞಾನ ಮಾದರಿಗಳ ಪ್ರದರ್ಶನದ ಹಿಂದೆ ಶಾಲೆಯ ವಿಜ್ಞಾನ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಡಗಿರುವ ವೈಜ್ಞಾನಿಕ ಪ್ರತಿಭೆಯನ್ನು ಗುರುತಿಸಿ, ಅವರ ಆಲೋಚನೆಗಳಿಗೆ ಪ್ರೋತ್ಸಾಹ ನೀಡಿ, ಹಗಲಿರುಳು ಶ್ರಮಿಸಿ ಈ ಮಾದರಿಗಳನ್ನು ರೂಪಿಸುವಲ್ಲಿ ಬೆಂಬಲವಾಗಿ ನಿಂತ ಶಿಕ್ಷಕರ ಕಾರ್ಯ ಹಾಗೂ ಮಾರ್ಗದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ವಿಜೇತರ ವಿವರ:
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ‘Fire Detector System’ ಮಾದರಿ ತಯಾರಿಸಿದ ಕು. ಆಧ್ಯಾ ಮತ್ತು ಕು. ಶಿವಾನಿ ಆರ್ ನಾಯಕ್ ಪ್ರಥಮ ಸ್ಥಾನ ಪಡೆದರೆ, ‘DJ System’ ‘ ಕುರಿತ ಮಾದರಿ ರಚಿಸಿದ ಮಾ.ಮನ್ವಿತ್ ಮತ್ತು ಮಾ.ಶ್ರೀತಿಕ್, ದ್ವಿತೀಯ ಸ್ಥಾನ ಹಾಗೂ ‘Electric Bell’ ಮಾದರಿ ತಯಾರಿಸಿದ ಮಾ. ಸಮರ್ಥ್ ಮತ್ತು ಮಾ.ಸಮೃಥ್ ತೃತೀಯ ಸ್ಥಾನ ಮುಡಿಗೇರಿಸಿಕೊಂಡರು.
ವಿದ್ಯಾಥಿಗಳಲ್ಲಿ ವಿಜ್ಞಾನದ ಬಗೆಗಿನ ಆಸಕ್ತಿಯನ್ನು ಮತ್ತಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಮೇಳದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ಭಾಗವಹಿಸುವಿಕೆ ಪ್ರಮಾಣ ಪತ್ರಗಳನ್ನು (Participation certificates) ವಿತರಿಸಲಾಿತು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತ, ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ ಶಶಿಕಾಂತ ನಾಯಕ ಸದಸ್ಯ ಶ್ರೀ ಆನಂದ ಪೂಜಾರಿ, ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ನ ಪ್ರತಿನಿಧಿಯಾಗಿರುವ ಸುಕೇಶ್ ಪೂಜಾರಿ, ಹಾಗೂ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಸುನಿಲ್ ಎಂ ಬಾಪಟ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತ ಸ್ವಾಗತಿಸಿ ವಿಜ್ಞಾನ ಶಿಕ್ಷಕಿ ಶ್ರೀಮತಿ ಶಾಂತಿ ನಾಯಕ್ ಧನ್ಯವಾದ ಸಮರ್ಪಿಸಿದರು. ಸಹ ಶಿಕ್ಷಕಿ ಶ್ರೀಮತಿ ಮಂಗಳಾ. ಕೆ ಕಾರ್ಯಕ್ರಮ ನಿರೂಪಣೆಗೈದರು.



