ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಂಧಿತರಾಗಿರುವ 8 ಮಂದಿ ಆರೋಪಿಗಳ ಪರವಾಗಿ ಜಿಲ್ಲೆಯ ಯಾವುದೇ ವಕೀಲರು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು ಎಂದು ಅಯೋಧ್ಯೆ ಬಾರ್ ಅಸೋಸಿಯೇಷನ್ ಸೋಮವಾರ ಒಮ್ಮತದ ನಿರ್ಣಯ ಕೈಗೊಂಡಿದೆ. ಒಂದು ವೇಳೆ ಈ ಆದೇಶವನ್ನು ಮೀರಿ ಯಾರಾದರೂ ವಕೀಲರು ಆರೋಪಿಗಳ ಪರ ನಿಂತರೆ ಅವರಿಗೆ 5 ಲಕ್ಷ ರೂ. ಭಾರಿ ದಂಡ ವಿಧಿಸಲಾಗುವುದು ಎಂದು ಅಸೋಸಿಯೇಷನ್ ಎಚ್ಚರಿಸಿದೆ. ಇದರಿಂದ ಆರೋಪಿಗಳ ಪರ ವಾದಿಸಲು ಯಾವುದೇ ವಕೀಲರು ಸಿಗದಂತಾಗಿದೆ.
ಇಂದು ನಡೆದ ಬಾರ್ ಅಸೋಸಿಯೇಷನ್ನ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ರಾಮ ಮಂದಿರದಲ್ಲಿ ಭಕ್ತರು ನೀಡಿದ ಕಾಣಿಕೆಯನ್ನು ಕಳ್ಳತನ ಮಾಡಿರುವುದರ ವಿರುದ್ಧ ಅಸೋಸಿಯೇಷನ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಭೆಯ ಸಂದರ್ಭದಲ್ಲಿ ಹಲವು ವಕೀಲರು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ನಿರ್ವಹಣೆಯೊಂದಿಗೆ ಗುರುತಿಸಿಕೊಂಡಿರುವ ಆದರೆ ಎಫ್ಐಆರ್ನಲ್ಲಿ ಆರೋಪಿಗಳೆಂದು ಹೆಸರಿಸಲ್ಪಡದ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರು ಅಯೋಧ್ಯೆಯನ್ನು ತೊರೆಯಬೇಕು ಎಂದು ಒತ್ತಾಯಿಸಿದರು. ಈ ಮೂವರು ಮುಂದಿನ ಮೂರು ದಿನಗಳೊಳಗೆ ನಗರವನ್ನು ತೊರೆಯದಿದ್ದರೆ, ಅಯೋಧ್ಯೆಯನ್ನು ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ಮತ್ತು ನಗರಕ್ಕೆ ಬರುವ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಬೃಹತ್ ಚಳವಳಿಯನ್ನು ಪ್ರಾರಂಭಿಸುವುದಾಗಿ ವಕೀಲರು ಎಚ್ಚರಿಕೆ ನೀಡಿದ್ದಾರೆ.



