ಮಂಗಳೂರು, ಡಿ. 3: ಸಿಎಂ, ಡಿಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕವೂ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಮುಂದುವರೆದಿದೆ. ಮಂಗಳೂರಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಮ್ಮುಖದಲ್ಲೇ ಸಿದ್ದರಾಮಯ್ಯ ಪರ ಒಂದು ಬಣ, ಡಿ.ಕೆ. ಶಿವಕುಮಾರ್ ಪರ ಮತ್ತೊಂದು ಬಣ ಜಿದ್ದಿಗೆ ಬಿದ್ದು ಶಕ್ತಿ ಪ್ರದರ್ಶನ ಮಾಡಿದ ಪ್ರಸಂಗ ನಡೆದಿದೆ. ಕೊಣಾಜೆಯಲ್ಲಿ ನಾರಾಯಣ ಗುರು-ಗಾಂಧಿ ಸಂವಾದ ಶತಮಾನೋತ್ಸವದಲ್ಲಿ ಭಾಗಿಯಾಗಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಂಗಳೂರಿಗೆ ಆಗಮಿಸಿದ್ದರು. ಈ ವೇಳೆ ವೇಣುಗೋಪಾಲ್ ಸಮ್ಮುಖದಲ್ಲೇ ಪಕ್ಷದಲ್ಲಿನ ಒಳ ರಾಜಕೀಯ ಬಯಲಾಗಿದೆ. ಏರ್ಪೋರ್ಟ್ನಿಂದ ವೇಣುಗೋಪಾಲ್ ಹೊರಗೆ ಬರ್ತಿದ್ದಂತೆ, ಬೆಂಬಲಿಗರು ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಘೋಷಣೆಗಳನ್ನ ಕೂಗಿದ್ದಾರೆ. ಡಿಕೆಶಿ ಆಪ್ತ ಮಿಥುನ್ ರೈ ಹಾಗೂ ಬೆಂಬಲಿಗರು ಘೋಷಣೆ ಕೂಗಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಇತ್ತ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ, ಅವರ ಬೆಂಬಲಿಗರು ಪೂರ್ಣಾವಧಿ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ ಪರಿಣಾಮ ತಳ್ಳಾಟ-ನೂಕಾಟ ಉಂಟಾಗಿ, ಏರ್ಪೋರ್ಟ್ನಿಂದ ಎಕ್ಸಿಟ್ ಆಗಲು ವೇಣುಗೋಪಾಲ್ ಹರಸಾಹಸ ಪಡುವಂತಾಯ್ತು. ಬಳಿಕ ಮಾತಾಡಿದ ಮಿಥುನ್ ರೈ, ನಮ್ಮ ನಾಯಕರ ಪರವಾಗಿ ನಾವು ಘೋಷಣೆ ಕೂಗಿದ್ದೇವೆ. ಸಿದ್ದರಾಮಯ್ಯ ಕೂಡ ನಮ್ಮ ನಾಯಕರೇ. ಆದ್ರೆ ಡಿ.ಕೆ.ಶಿವಕುಮಾರ್ ಅವ್ರಿಗೆ ಸಿಎಂ ಆಗಲು ಒಂದು ಅವಕಾಶ ಸಿಗ್ಬೇಕು ಅಂತಾ ಆಗ್ರಹಿಸಿದ್ದಾರೆ.





