ಬೆಳ್ತಂಗಡಿ: ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದೆ. ಆಗಸ್ಟ್ 1 ರಂದು ಸುರಿದ ಭಾರೀ ಮಳೆಗೆ ತಾಲೂಕಿನ ಹಲವೆಡೆ ಸಂಪರ್ಕ ಕಡಿತ, ಗುಡ್ಡ ಜರಿತ, ತೋಟ ಮತ್ತು ಮನೆಗಳು ಜಲಾವೃತಗೊಂಡು ವ್ಯಾಪಕ ಹಾನಿಯಾಗಿದೆ.


ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು ಅವರು ಆ. 5 ರಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾಯಿಲ ಭಾಗದಲ್ಲಿ ಸಂಪರ್ಕ ಕಡಿತಗೊಂಡಿರುವ ರಸ್ತೆಗಳು ಮತ್ತು ಗುಡ್ಡ ಕುಸಿತದ ಸಾಧ್ಯತೆ ಇರುವ ಪ್ರದೇಶಗಳನ್ನು ಪರಿಶೀಲಿಸಿದರು.
ಭೇಟಿ ವೇಳೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರಡ್ಡಿ, ಡಿವೈಎಸ್ಪಿ ರೋಹಿಣಿ, ತಹಶೀಲ್ದಾರ್ ಎಸ್.ಎನ್.ನರಗುಂದ, ತಾ.ಪಂ ಇಒ ಭವಾನಿಶಂಕರ್, ಕಂದಾಯ ನಿರೀಕ್ಷಕ ರಾಜು ಲಮಾಣಿ, ಲಾಯಿಲ ಪಿಡಿಒ ತಾರಾನಾಥ್ ನಾಯ್, ಲಾಯಿಲ ಗ್ರಾ.ಆ.ಅಧಿಕಾರಿ ರನಿತಾ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿ ಬ್ಲಾಕ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ನ, ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಇಂಜಿನಿಯರ್ ಸಂದೀಪ್, ಪಿ.ಆರ್.ಡಿ.ಇ. ಎಇಇ ಜನಾರ್ಧನ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.



