March 3 Lunar Eclipse: ಮಾರ್ಚ್ 3ರ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಪ್ರಮುಖ ದೇವಾಲಯಗಳ ದರ್ಶನ ಹಾಗೂ ಪೂಜಾ ಸಮಯದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಬೇಲೂರು, ಬೆಂಗಳೂರು, ಧರ್ಮಸ್ಥಳದಂತಹ ದೇಗುಲಗಳು ಗ್ರಹಣದ ಅವಧಿಯಲ್ಲಿ ಮುಚ್ಚಲಿವೆ ಅಥವಾ ಸಮಯ ಬದಲಾಯಿಸಲಿವೆ. ಮಂತ್ರಾಲಯ, ಬಂಡೆ ಮಹಾಂಕಾಳಿ, ಮಲೆ ಮಹದೇಶ್ವರ ದೇವಾಲಯಗಳಲ್ಲಿ ದರ್ಶನಕ್ಕೆ ಅವಕಾಶವಿದೆ. ಗ್ರಹಣ ಮುಕ್ತಾಯದ ನಂತರ ಶುದ್ಧೀಕರಣ ಹಾಗೂ ವಿಶೇಷ ಪೂಜೆಗಳು ನಡೆಯಲಿವೆ.
ನಾಳೆ (ಮಾರ್ಚ್ 3) ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಮತ್ತು ಅನ್ನಪ್ರಸಾದದ ಸಮಯದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಕುರಿತು ದೇವಸ್ಥಾನದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ನಾಳೆ ಮಧ್ಯಾಹ್ನ 1:30 ಗಂಟೆಗೆ ದೇವಸ್ಥಾನದ ಬಾಗಿಲನ್ನು ಹಾಕಲಾಗುವುದು. ಬೆಳಗಿನ ಪೂಜೆಗಳೆಲ್ಲವೂ 1:30ರ ಒಳಗಾಗಿ ಮುಕ್ತಾಯಗೊಳ್ಳಲಿವೆ. ಮಧ್ಯಾಹ್ನ ದೇವಸ್ಥಾನ ಬಂದ್ ಆದ ನಂತರವೂ, ಅತಿಥಿ ಅಭ್ಯಾಗತರಿಗಾಗಿ ಮಧ್ಯಾಹ್ನ 2:00 ಗಂಟೆಯವರೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಗ್ರಹಣ ಮುಕ್ತಾಯದ ನಂತರ, ಅಂದರೆ ಸಂಜೆ 7:00 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಗರ್ಭಗುಡಿಯ ಶುದ್ಧೀಕರಣ ಮತ್ತು ಅಭಿಷೇಕದ ನಂತರ, ರಾತ್ರಿ 7:30ರ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಮುಕ್ತ ಅವಕಾಶವಿರುತ್ತದೆ. ದೇವರ ದರ್ಶನ ಆರಂಭವಾದ ಬಳಿಕ ಎಂದಿನಂತೆ ರಾತ್ರಿಯ ಅನ್ನಪ್ರಸಾದ ವಿತರಣೆಯೂ ಪ್ರಾರಂಭವಾಗಲಿದೆ.





