ಮಂಗಳೂರು ರೋಟರಿ ಕ್ಲಬ್ ಕಾಸರಗೋಡಿನ ಹಿರಿಯ ದೈವ ನರ್ತಕ ಬಾಬು ಅವರಿಗೆ ಹೊಸ ಬದುಕು ನೀಡಿದೆ. ಮಧುಮೇಹದಿಂದ ಎಡಗಾಲು ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಬು, ರೋಟರಿ ಮಾಜಿ ಗವರ್ನರ್ ಡಾ. ದೇವದಾಸ್ ರೈ ನೆರವಿನಿಂದ 2.10 ಲಕ್ಷ ರೂ. ಮೌಲ್ಯದ ಕೃತಕ ಕಾಲು ಪಡೆದರು. ರೋಟರಿ ಮಂಗಳೂರು ಸೆಂಟ್ರಲ್ನ ಈ ಮಾನವೀಯ ಕಾರ್ಯದಿಂದ ಬಾಬು ಈಗ ಆಧಾರವಿಲ್ಲದೆ ನಡೆಯುತ್ತಿದ್ದು, ತಮ್ಮ ‘ಮರುಜೀವ’ಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮಂಗಳೂರು, ಫೆ.16: ತುಳುನಾಡಿನ ನಂಬಿಕೆಯ ಪ್ರಕಾರ, ದೈವಗಳು ದೇವರಿಗಿಂತ ಭಿನ್ನ. ದೇವರು ಕಣ್ಣಿಗೆ ಕಾಣದ ಶಕ್ತಿಯಾದರೆ, ದೈವಗಳು ನೆಲದ ಮೇಲೆ ಸಂಚರಿಸುವ, ಭಕ್ತರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಶಕ್ತಿಗಳು. ದೈವಗಳನ್ನು ನಂಬಿದವರ ಕೈ ಬಿಡದ ಶಕ್ತಿಗಳು ಎಂದು ಕರೆಯಲಾಗುತ್ತದೆ. ಇನ್ನು ದೈವಗಳ ನೇಮೋತ್ಸವದಂದು ಗಗ್ಗರ ಸೇವೆ ಮೊದಲು ನಡೆಯುತ್ತದೆ. ಈ ವೇಳೆ ದೈವ ನರ್ತಕರು ಕಾಲಿಗೆ ಗಗ್ಗರ ಕಟ್ಟುತ್ತಾರೆ. ಆದರೆ ಇಲ್ಲೊಬ್ಬ ನರ್ತಕರಿಗೆ ಅದನ್ನು ಕಟ್ಟಲು ಕಾಲುಗಳೇ ಇಲ್ಲ!
ಹೌದು, ಕಾಸರಗೋಡು ತಾಲೂಕಿನ ಪೆರ್ಮುದೆ ಗ್ರಾಮದ ಹಿರಿಯ ದೈವ ನರ್ತಕ ಬಾಬು (53 ವರ್ಷ) ಅವರಿಗೆ ಮಂಗಳೂರು ಸೆಂಟ್ರಲ್ ರೋಟರಿ ಸಂಸ್ಥೆಯು ಮಾನವೀಯತೆಯ ನೆಲೆಯಲ್ಲಿ ಹೊಸ ಬದುಕು ನೀಡಿದೆ. ಬಾಬು ಅವರು ದೀರ್ಘಕಾಲದಿಂದ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಅತಿಯಾದ ಮಧುಮೇಹದಿಂದಾಗಿ ಅವರ ಎಡಗಾಲಿಗೆ ‘ಗ್ಯಾಂಗ್ರೀನ್’ ರೋಗ ತಗುಲಿತ್ತು. ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ವೈದ್ಯರು ಅವರ ಕಾಲನ್ನೇ ಕತ್ತರಿಸಬೇಕಾಯಿತು.
ಕಾಲು ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದ ಬಾಬು ಅವರು ರೋಟರಿ ಮಾಜಿ ಜಿಲ್ಲಾ ಗವರ್ನರ್ ಮತ್ತು ಖ್ಯಾತ ವೈದ್ಯರಾದ ಡಾ. ದೇವದಾಸ್ ರೈ ಅವರನ್ನು ಭೇಟಿ ಮಾಡಿ ಸಹಾಯ ಕೋರಿದ್ದರು. ಬಾಬು ಅವರ ಕರುಣಾಜನಕ ಸ್ಥಿತಿಯನ್ನು ಮನಗಂಡ ಡಾ. ರೈ ಅವರು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ನ ಸಮಾಜ ಸೇವಾ ಯೋಜನೆಯಡಿ ಸುಮಾರು 2.10 ಲಕ್ಷ ರೂಪಾಯಿ ಮೌಲ್ಯದ ಕೃತಕ ಕಾಲನ್ನು ಮಂಜೂರು ಮಾಡಿಸಿದರು.
ಇತ್ತೀಚೆಗೆ ಮಂಗಳೂರಿನ ಡಾ. ದೇವದಾಸ್ ರೈ ಅವರ ‘ಸೌರಭ್’ ಚಿಕಿತ್ಸಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಾಬು ಅವರಿಗೆ ಕೃತಕ ಕಾಲನ್ನು ಜೋಡಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಮಾಜಿ ಅಧ್ಯಕ್ಷ ಸಂತೋಷ್ ಶೆಟ್ ಮತ್ತು ಮಾಧ್ಯಮ ಸಲಹೆಗಾರ ಎಂ.ವಿ. ಮಲ್ಯ ಉಪಸ್ಥಿತರಿದ್ದರು. ಈಗ ಬಾಬು ಅವರು ಯಾವುದೇ ಆಧಾರವಿಲ್ಲದೆ ಸುಸೂತ್ರವಾಗಿ ನಡೆದಾಡುತ್ತಿದ್ದು, ತಮಗೆ ಮರುಜೀವ ನೀಡಿದ ರೋಟರಿ ಸಂಸ್ಥೆಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ.





