ಪಡಂಗಡಿ: ತಾಲೂಕಿನಲ್ಲಿ ಚಿರತೆ ಹಾವಳಿ ನಿರಂತರವಾಗಿ ಮುಂದುವರಿದಿದ್ದು, ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆಯಲ್ಲಿ ಚಿರತೆ ಆಡನ್ನು ಕೊಂದು ಹಾಕಿದೆ.
ಪಡಂಗಡಿಪೊಯ್ಯೆಗುಡ್ಡೆಯಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಮನೆಯ ಸಮೀಪದ ಹಟ್ಟಿಯಲ್ಲಿ ಕಟ್ಟಿದ್ದ ಆಡನ್ನು ಚಿರತೆ ಕೊಂದು ಹಾಕಿದ್ದು ಅರ್ಧ ತಿಂದ ಬಳಿಕ ಬಿಟ್ಟು ಹೋಗಿದೆ. ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿರುವ ನಡ ಗ್ರಾ.ಪಂ. ವ್ಯಾಪ್ತಿಯ ಕನ್ಯಾಡಿಯಲ್ಲಿ ಶುಕ್ರವಾರ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಸ್ಥಳೀಯ ನಿವಾಸಿ ರಮಾನಂದ ಶರ್ಮ ಅವರ ಮನೆಯ ಸಮೀಪ ಗದ್ದೆಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಇದೇ ಗ್ರಾಮದಲ್ಲಿ ಈ ಹಿಂದೆ ಚಿರತೆ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿತ್ತು ಹಾಗೂ ಅರಣ್ಯ ಇಲಾಖೆಯ ಬೋನಿಗೆ ಚಿರತೆಯೊಂದು ಬಿದ್ದಿತ್ತು. ಒಂದು ಚಿರತೆಯನ್ನು ಹಿಡಿದಿದ್ದರೂ ಈ ಪರಿಸರದಲ್ಲಿ ಮತ್ತೆ ಚಿರತೆಯ ಓಡಾಟ ಕಂಡುಬರುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.






