ಉಡುಪಿ, ಜ. 27: ನಿವೃತ್ತ ಆರ್ಮಿ ಕಮಾಂಡರ್ ಶ್ಯಾಮರಾಜ ಅವರಿಗೆ ಟೋಲ್ ಗೇಟ್ ನಲ್ಲಿ ಅವಮಾನ ಮಾಡಿದ ಘಟನೆ ನಡೆದಿದ್ದು, ಇದೀಗ ಟೋಲ್ ಸಿಬ್ಬಂದಿ ಕ್ಷಮೆ ಯಾಚಿಸಿದ್ದಾರೆ. ಜ.25ರ ರಾತ್ರಿ ಉಡುಪಿ ಜಿಲ್ಲೆಯ ಕೋಟ ಸಮೀಪದ ಸಾಸ್ತಾನದಲ್ಲಿ ಈ ಘಟನೆ ನಡೆದಿದ್ದು, ವಿನಾಯಿತಿ ನೀಡದೆ ಯೋಧನಿಗೆ ಅವಮಾನ ಮಾಡಲಾಗಿತ್ತು. ಈ ಬಗ್ಗೆ ಆರ್ಮಿ ಕಮಾಂಡರ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಗಣರಾಜ್ಯೋತ್ಸವ ದಿನವೇ ಯೋಧರಿಗೆ ಅವಮಾನ ಎಂದು ವಿಡಿಯೋ ವೈರಲ್ ಕೂಡಾ ಆಗಿತ್ತು. ದುರಂತವೊಂದರಲ್ಲಿ ಸೇನಾ ವಾಹನ 400 ಅಡಿಗೆ ಬಿದ್ದಾಗ ಪವಾಡ ಸದೃಶ್ಯವಾಗಿ ಆರ್ಮಿ ಕಮಾಂಡರ್ ಶ್ಯಾಮರಾಜ ಬದುಕುಳಿದಿದ್ದು, ವೀಲ್ ಚೇರ್ ಅವಲಂಬಿಸಿ ಜೀವನ ನಡೆಸುತ್ತಿದ್ದರು. ಆದರೆ ಟೋಲ್ ಸಿಬ್ಬಂದಿ ವಿನಾಯಿತಿ ನೀಡಿರಲಿಲ್ಲ.ಈ ಬಗ್ಗೆ ಕ್ಷಮೆ ಯಾಚಿಸಿದ ಸಿಬ್ಬಂದಿಗಳು ಯೋಧರಿಗೆ ಟೋಲ್ ಗೇಟ್ ನಲ್ಲಿ ವಿನಾಯಿತಿ ಬಗ್ಗೆ ನನಗೆ ಸರಿಯಾದ ಮಾಹಿತಿ ಇರಲಿಲ್ಲ. ವಿನಾಯಿತಿ ಬಗ್ಗೆ ಮೇಲಾಧಿಕಾರಿಗಳಿಗೆ ವಿವರಗಳನ್ನು ಕಳುಹಿಸಿದ್ದೆ. ಅವರು ಖಚಿತಪಡಿಸುವುದು ತಡವಾದ ಕಾರಣ ಗೊಂದಲ ಉಂಟಾಯಿತು. ಸ್ಥಳದಲ್ಲೇ ಯೋಧರ ಬಳಿ ಕ್ಷಮೆ ಕೇಳಿದ್ದೇನೆ, ಈಗ ಮತ್ತೊಮ್ಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.






