ಬೆಳ್ತಂಗಡಿ ಘಟನೆಯ ನೆನಪು ಮಾಸುವ ಮುನ್ನವೇ ಮರುಕಳಿಸಿದ ಮತ್ತೊಂದು ಅಪಹರಣ ಕಥೆ ಪ್ರಕರಣ!
ಇತ್ತೀಚೆಗೆ ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿಯೋರ್ವಳು ಅಪಹರಣಯತ್ನದ ಕಥೆ ಕಟ್ಟಿ ಬಳಿಕ ಸತ್ಯಒಪ್ಪಿಕೊಂಡ ವಿದ್ಯಾಮಾನದ ನೆನಪು ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಇಂಥದ್ದೇ ಒಂದು ಘಟನೆ ಮರುಕಳಿಸಿದೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇಬ್ಬರು ಸಹೋದರಿಯರು ಶಾಲೆಗೆ ಹೋಗಲು ಇಷ್ಟವಿಲ್ಲದೆ ಅಪಹರಣದ ಸುಳ್ಳು ಕಥೆ ಹೆಣೆದಿದ್ದಾರೆ. ಶಾಲೆಯಿಂದ ನಾಪತ್ತೆಯಾಗಿದ್ದ ಇವರು, ಅಪಹರಣಕಾರರ ಬಗ್ಗೆ ಪೊಲೀಸರಿಗೆ ಸುಳ್ಳು ಮಾಹಿತಿ ಡಿದ್ದರು. ಸಿಸಿಟಿವಿ ಪರಿಶೀಲಿಸಿದಾಗ ಶಾಲೆ ಬಿಟ್ಟು ಊರು ಸುತ್ತಿರುವುದು ಬಯಲಾಗಿದೆ. ಕೊನೆಗೆ, ಲಸ್ಸಿ ಕುಡಿದು ಕಾಲ ಕಳೆದಿದ್ದಾಗಿ ಬಾಲಕಿಯರು ಸತ್ಯ ಒಪ್ಪಿಕೊಂಡಿದ್ದಾರೆ.
ಶಾಲೆಗೆ ಹೋಗಲು ಮನಸ್ಸಿಲ್ಲದ ಬಾಲಕಿಯರು ಅಪಹರಣ ಕಥೆ ಕಟ್ಟಿ ಸಿಕ್ಕಿಬಿದ್ದಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಮನೆಯಿಂದ ಸ್ಕೂಲ್ಗೆಂದು ಹೋಗಿದ್ದ 14 ಮತ್ತು 8 ವರ್ಷದ ಇಬ್ಬರು ಸಹೋದರಿಯರು ನಾಪತ್ತೆಯಾಗಿದ್ದಾರೆ. ಶಾಲೆ ಬಳಿ ಹಾದುಹೋಗುತ್ತಿದ್ದ ಬಾಲಕಿಯರ ವಿಚಾರಿಸಿದಾಗ ಅವರು ತರಗತಿಗಳಿಗೆ ಹಾಜರಾಗಿಲ್ಲವೆಂಬ ವಿಷಯ ಗೊತ್ತಾಗಿದೆ. ಪರಿಶೀಲನೆ ನಡೆಸಿದ ವೇಳೆ ಶಾಲೆಯ ಕ್ಯಾಂಪಸ್ನಲ್ಲಿ ಅವರ ಬ್ಯಾಗ್ ದೊರೆತಿದ್ದು, ಬಾಲಕಿಯರ ಪತ್ತೆ ಮಾತ್ರ ಆಗಿಲ್ಲ. ಇದರಿಂದ ಭಯಗೊಂಡ ಕುಟುಂಬಸ್ಥರು ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಚಾಮರಾಜಪೇಟೆ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ. ಇದೇ ವೇಳೆ ಬಾಲಕಿಯರ ತಂದೆಗೆ ಅಪರಿಚಿತ ಸಂಖ್ಯೆಯಿಂದ ದೂರವಾಣಿ ಕರೆ ಬಂದಿದೆ. ಹಿರಿಯ ಮಗಳು ಮಾತನಾಡಿ, ತಾವು ಮನೆ ಸಮೀಪದಲ್ಲಿದ್ದೇವೆ, ಪಾದಚಾರಿಯೊಬ್ಬರ ಫೋನ್ನಿಂದ ಕರೆ ಮಾಡುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾಳೆ. ಕುಟುಂಬಸ್ಥರು ತಕ್ಷಣತೆರಳಿ ನೋಡಿದಾಗ ಇಬ್ಬರೂ ಸುರಕ್ಷಿತವಾಗಿರೋದು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ.
ಕಥೆ ಹೆಣೆದಿದ್ದ ಸಹೋದರಿಯರು!
ಎಲ್ಲಿ ಹೋಗಿದ್ದಿರಿ ಎಂದು ವಿಚಾರಿಸಿದಾಗ ಬಾಲಕಿಯರು ಅಪಹರಣದ ಕಥೆ ಹೇಳಿದ್ದರು. ನಾಲ್ವರು ಸದಸ್ಯರ ಗ್ಯಾಂಗ್ ಕಾರಿನಲ್ಲಿ ತಮ್ಮನ್ನು ಕರೆದೊಯ್ದಿದ್ದರು. ನಮ್ಮನ್ನು ಬೆದರಿಸಿ, ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿದ್ದರು. ಜೊತೆಗೆ ಮುಂದಿನ ವಾರ ಮರಳಿ ಬರುವಾಗ ಸಹಕರಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಹಿರಿಯ ಬಾಲಕಿ ತಿಳಿಸಿದ್ದಾಳೆ. ಈ ಹೇಳಿಕೆಯನ್ನು ಆಧರಿಸಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 123, 137 ಮತ್ತು 140 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಲಿಸಿದಾಗ ಯಾವುದೇ ಅನುಮಾನಾಸ್ಪದ ವಾಹನ, ಅನ್ಯ ವ್ಯಕ್ತಿಗಳ ಚಲನವಲನ ಪತ್ತೆಯಾಗಲಿಲ್ಲ. ಬದಲಾಗಿ ಪರಿಶೀಲನೆ ಮುಂದುವರಿಸಿದಾಗ ಸಿಸಿಟಿವಿಯಲ್ಲಿ ಇಬ್ಬರು ಸಹೋದರಿಯರು ಸಮೀಪದ ಬೀದಿಗಳಲ್ಲಿ ನಿರಾಳವಾಗಿ ಸಂಚರಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ಮತ್ತೊಮ್ಮೆ ವಿಚಾರಣೆ ನಡೆಸಿದಾಗ ಬಾಲಕಿಯರು ನಿಜವನ್ನು ಒಪ್ಪಿಕೊಂಡಿದ್ದಾರೆ. ಶಾಲೆಗೆ ಹೋಗದೆ ಸುತ್ತಾಡಲು ನಿರ್ಧರಿಸಿದ್ದ ಅವರು, ಸಮೀಪದ ಅಂಗಡಿಯಲ್ಲಿ ಲಸ್ಸಿ ಕುಡಿದು ಕಾಲ ಕಳೆದಿದ್ದರು ಎಂಬ ವಿಚಾರ ಬಯಲಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.





