ಸಚಿವ ಡಿ.ಸುಧಾಕರ್ ಅವರ ರಾಜಕೀಯ ಹಿನ್ನಲೆ ಮತ್ತು ಜೀವನದ ಸಂಪೂರ್ಣ ಮಾಹಿತಿ ಇಲ್ಲಿದೆ.

 

ಹಿರಿಯೂರು ಶಾಸಕ ಡಿ. ಸುಧಾಕರ್ ಅವರಿಗೆ ಸಚಿವ ಭಾಗ್ಯ ಒಲಿದಿದೆ. ಚಿತ್ರದುರ್ಗ ಜಿಲ್ಲೆಯಿಂದ ಅವರೊಬ್ಬರಿಗೆ ಸಚಿವ ಸ್ಥಾನ ಸಿಕ್ಕಿದೆ. ಚಿತ್ರದುರ್ಗ ಚಳ್ಳಕೆರೆಯಲ್ಲಿ 1961ರಲ್ಲಿ ಮಾ. 28ರಂದು ಜನಿಸಿದ್ದ ಸುಧಾಕರ್, ಚಿತ್ರದುರ್ಗ ಜಿಲ್ಲೆಯಲ್ಲೇ ಪಿಯುಸಿ ವಿದ್ಯಾಭ್ಯಾಸ ಮುಗಿಸಿ, ನಂತರ ಬಿಕಾಂ ಪದವಿ ಶಿಕ್ಷಣವನ್ನು ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಕೈಗೊಂಡಿದ್ದರು. ಚಳ್ಳಕೆರೆಯಲ್ಲಿ 1978 ಹಾಗೂ 1989ರಲ್ಲಿ ಶಾಸಕರಾಗಿದ್ದ ಹಾಗೂ ಸರ್ಕಾರದ ಮುಖ್ಯ ಸಚೇತಕರಾಗಿದ್ದ ಎನ್. ಜಯಣ್ಣ ಅವರು ಇವರ ಚಿಕ್ಕಪ್ಪ.

ಹೈಲೈಟ್ಸ್‌:
ಹಿರಿಯೂರು ತಾಲೂಕಿನ ಶಾಸಕ ಡಿ. ಸುಧಾಕರ್ ಅವರಿಗೆ ಒಲಿದ ಮಂತ್ರಿಪಟ್ಟ.
1961ರಲ್ಲಿ ಮಾ. 28ರಂದು ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಜನಿಸಿದ್ದರು.

ಬಿಕಾಂ ಪದವೀಧರರಾದ ಅವರು 2004ರಲ್ಲಿ ಮೊದಲ ಬಾರಿ ಶಾಸಕರಾಗಿ ಗೆದ್ದಿದ್ದರು.

ಚಿತ್ರದುರ್ಗ: ರಾಜ್ಯದಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರವೂ ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಯಾಕೆಂದರೆ ಇಲ್ಲಿ ಹೊರಗಿನವರಿಗೆ ಆದ್ಯತೆ ನೀಡುವುದೇ ಇಲ್ಲಿನ ಮತದಾರರ ತೀರ್ಪು. ಇಲ್ಲಿ ಯಾರು ಗೆಲ್ಲುತ್ತಾರೆ ಆ ಪಕ್ಷ ಸರ್ಕಾರ ರಚಿಸುವುದು ಸಾಧ್ಯತೆ ಇರುತ್ತದೆ.
ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯೂರು ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಸಿಕ್ಕಿದೆ. ಇಲ್ಲಿನ ಶಾಸಕ ಡಿ ಸುಧಾಕರ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆಗಿದ್ರೆ ಹಿರಿಯೂರು ಶಾಸಕರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಅಂದಹಾಗೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿರುವ ಡಿ ಸುಧಾಕರ್ ಅವರ ರಾಜಕೀಯ ಬಗ್ಗೆ ತಿಳಿಯೋಣ ಬನ್ನಿ.

ದಿವಂಗತ ಎನ್. ದಯಶರಥಯ್ಯ ಮಗನಾಗಿ, 1961ರಲ್ಲಿ ಮಾ. 28ರಂದು ಚಳ್ಳಕೆರೆಯಲ್ಲಿ ಜನಿಸಿದ್ದ ಸುಧಾಕರ್, ಚಿತ್ರದುರ್ಗ ಜಿಲ್ಲೆಯಲ್ಲೇ ಪಿಯುಸಿ ವಿದ್ಯಾಭ್ಯಾಸ ಮುಗಿಸಿ, ನಂತರ ಬಿಕಾಂ ಪದವಿ ಶಿಕ್ಷಣವನ್ನು ಶಿವಮೊಗ್ಗದ ನ್ಯಾಷನಲ್ ಕಾಲೇಜು ಮುಗಿಸಿದ್ದಾರೆ.

ಪದವಿ ಶಿಕ್ಷಣ ಮುಗಿಸಿದ ಬಳಿಕ ಬ್ಯುಸಿನೆಸ್ ಕಡೆ ಗಮನಹರಿಸಿದ್ದರು. ನಂತರ ಶ್ರೀಮತಿ ಹರ್ಷಿಣಿ ಎಂಬುವರೊಂದಿಗೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಒಂದು ಗಂಡು ಮತ್ತು ಒಬ್ಬ ಹೆಣ್ಣು ಮಗಳಿದ್ದಾರೆ. ಇನ್ನು ಇವರ ಚಿಕ್ಕಪ್ಪರಾದ ಎನ್. ಜಯಣ್ಣ ಅವರು ಚಳ್ಳಕೆರೆ ಕ್ಷೇತ್ರದಲ್ಲಿ 1978 ಹಾಗೂ 1989ರಲ್ಲಿ ಎರಡು ಬಾರಿ ಶಾಸಕರಾಗಿದ್ದರು. ಚಿಕ್ಕಪ್ಪನ ರಾಜಕೀಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಡಿ.ಸುಧಾಕರ್ ರಾಜಕೀಯ ದಾರಿಯನ್ನು ಕಂಡುಕೊಂಡರು.

ಡಿ.ಸುಧಾಕರ್‌ ಅವರು ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ 2004ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 47,550 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದರು. ನಂತರ ಚಳ್ಳಕೆರೆ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾದ್ದರಿಂದ 2008ರಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ದಿಢೀರ್ ಬಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 43,078 ಮತಗಳನ್ನು ಪಡೆದು 16,158 ಮತಗಳ ಅಂತರದಿಂದ ಅಮೋಘ ಗೆಲುವು ಸಾಧಿಸಿದ್ದರು.

ಈ ಮೂಲಕ ಅವರು ಬಿಜೆಪಿ ಸರ್ಕಾರದಲ್ಲಿ ಮೊದಲ ಬಾರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಆಡಳಿತ ನಡೆಸಿದರು. ಬದಲಾದ ಸಮಯದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕರಾಗಿ ಮುಂದುವರೆದರು. ಇನ್ನು 2013ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಆಗ ಇವರಿಗೆ ಟಿಕೆಟ್ ತಪ್ಪಿಸಲು ಸಾಕಷ್ಟು ಪ್ರಯತ್ನ ನಡೆದವು. ಆದರೆ ಅದು ಸಾಧ್ಯವಾಗಲಿಲ್ಲ.

2013ರಲ್ಲಿ ಡಿ.ಸುಧಾಕರ್ ಅವರಿಗೆ ಕಾಂಗ್ರೆಸ್ ಪಕ್ಷ ಬಿ ಫಾರಂ ನೀಡಿತ್ತು. ಜೆಡಿಎಸ್ ಅಭ್ಯರ್ಥಿ ದಿವಂಗತ ಎ.ಕೃಷ್ಣಪ್ಪ ವಿರುದ್ಧ ಕೂದಲೆಳೆ ಅಂತರದಲ್ಲಿ ಅಂದರೆ 1,205 ಮತಗಳನ್ನು ಪಡೆದು, ಮರು ಆಯ್ಕೆ ಆದರು. (71661ಒಟ್ಟು ಮತಗಳು) ಇದರ ಜೊತೆಗೆ ಚಿತ್ರದುರ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಸಹ ಆಯ್ಕೆಯಾದರು.

ನಂತರ 2018ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ಈ ಚುನಾವಣೆಯಲ್ಲಿ 64,858 ಮತಗಳನ್ನು ಪಡೆದು, ಮತದಾರರ ತೀರ್ಪಿಗೆ ಸುಧಾಕರ್ ತಲೆ ಭಾಗಿಸಿದರು. ಯಾಕಂದರೆ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸುಮಾರು 12 ಸಾವಿರ ಮತಗಳಿಂದ ಪರಾಭವಗೊಂಡರು.

ಇದೀಗ ಮೇ 10 ರಂದು ನಡೆದ 2023ರ ರಾಜ್ಯ ವಿಧಾನಸಭಾ ಚುನಾವಣೆಯ ಮೇ 13 ರಂದು ನಡೆದ ಮತದಾನ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರ ವಿರುದ್ಧ 30322 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಒದಗಿ ಬಂದಿದೆ. 2008 ಮತ್ತು 2023ರಲ್ಲಿ ಸುಧಾಕರ್ ಅವರಿಗೆ ಮಂತ್ರಿ ಪಟ್ಟ ಲಭಿಸಿದೆ.

[t4b-ticker]

You May Also Like

More From Author

+ There are no comments

Add yours