ದಾವಣಗೆರೆ, ಮಾ. 3: ಜೈನ್ ಸಮುದಾಯದಲ್ಲಿ ಅಪರೂಪದ ಆಧ್ಯಾತ್ಮಿಕ ಘಟನೆಯೊಂದು ನಗರದಲ್ಲಿ ನಡೆಯಲಿದೆ. ಜೈನ್ ಸಮಾಜದ ನಾಲ್ವರು ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದು, ಮಾರ್ಚ್ 4ರಂದು ನಗರದ ಹೊಳೆಹೊನ್ನೂರು ತೋಟದಲ್ಲಿ ದೀಕ್ಷಾ ಮಹೋತ್ಸವ ಜರುಗಲಿದೆ. ಜೈನ ಗುರು ಅಭಯ್ ಶೇಖರ್ ಸುರೀಶ್ವರ ಮಹಾರಾಜ್ ಅವರ ಸಮ್ಮುಖದಲ್ಲಿ ಇಬ್ಬರು ಯುವತಿಯರು ಹಾಗೂ ಉದ್ಯಮಿ ದಂಪತಿ ಸನ್ಯಾಸ ಜೀವನಕ್ಕೆ ಕಾಲಿಡಲಿದ್ದಾರೆ.
ನಗರದ ಪ್ರಸಿದ್ಧ ಲಲಿತ್ ಗಾರ್ಮೆಂಟ್ಸ್ ಮಾಲೀಕರಾದ ಭರತ್ ಜೈನ್ (52) ಮತ್ತು ಅವರ ಪತ್ನಿ ಆರತಿ ಜೈನ್ (50) ಸನ್ಯಾಸ ಸ್ವೀಕರಿಸಲಿದ್ದು, ಇವರೊಂದಿಗೆ ಎಂಬಿಎ ಪದವೀಧರೆ ಕ್ರುನಾಲಿ ಜೈನ್ (30) ಹಾಗೂ ಬಿಕಾಂ ಪದವೀಧರೆ ದೀಕ್ಷಿತಾ ಜೈನ್ (28) ಸಹ ದೀಕ್ಷೆ ಪಡೆಯಲಿದ್ದಾರೆ.
ಮಕ್ಕಳ ಹಾದಿಯನ್ನೇ ಅನುಸರಿಸಿದ ದಂಪತಿ
ಕ್ರುನಾಲಿ ಜೈನ್ ಅವರು ಪುಣೆಯ ಸಿಂಬಯೋಸಿಸ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ದೀಕ್ಷಿತಾ ಜೈನ್ ಅವರು ಮೂಲತಃ ದಾವಣಗೆರೆಯವರಾಗಿದ್ದು, ಅರುಣ್ ಕುಮಾರ್ ಜೈನ್ ಹಾಗೂ ಅನ್ನಪೂರ್ಣ ಬಾಯಿ ಅವರ ಪುತ್ರಿಯಾಗಿದ್ದಾರೆ. ಕ್ರುನಾಲಿ ಅವರು ಕಮಲೇಶ್ ಜೈನ್ ಮತ್ತು ಬಬಿತಾ ಜೈನ್ ಅವರ ಪುತ್ರಿ. ವಿಶೇಷವೆಂದರೆ, ಭರತ್ ಜೈನ್ ಹಾಗೂ ಆರತಿ ದಂಪತಿಯ ಇಬ್ಬರು ಪುತ್ರರು ಮೂರು ವರ್ಷಗಳ ಹಿಂದೆ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಮಗ್ನಶೇಖರ್ ವಿಜಯ್ ಮಹಾರಾಜ್ (28) ಹಾಗೂ ಪೂರ್ಣಶೇಖರ್ ವಿಜಯ್ (25) ಈಗ ಧಾರ್ಮಿಕ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪುತ್ರರ ಮಾರ್ಗವನ್ನು ಅನುಸರಿಸಿ ದಂಪತಿಗಳೂ ಈಗ ಗ್ರಹಸ್ಥಾಶ್ರಮ ತ್ಯಜಿಸಿ ಧರ್ಮ ಮಾರ್ಗವನ್ನು ಆರಿಸಿಕೊಂಡಿದ್ದಾರೆ.
ಸನ್ಯಾಸ ದೀಕ್ಷೆಗೆ ಮುನ್ನ ಸೋಮವಾರ ರಾತ್ರಿ ಅರುಣಾ ಟಾಕೀಸ್ ಮುಂಭಾಗದ ಹೊಳೆಹೊನ್ನೂರು ತೋಟದಲ್ಲಿ ನಾಲ್ವರಿಗೆ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು. ಕುಟುಂಬ ಜೀವನದ ಅಂತಿಮ ದಿನವನ್ನು ಆಚರಿಸಿಕೊಂಡು, ಇಂದು (ಮಾರ್ಚ್ 3) ನಗರದಲ್ಲಿ ಭವ್ಯ ಮೆರವಣಿಗೆ ನಡೆಯಲಿದ್ದು, ನಾಳೆ ವಿಧಿವಿಧಾನಗಳೊಂದಿಗೆ ದೀಕ್ಷಾ ಸಮಾರಂಭ ಜರುಗಲಿದೆ.





