ಚಿತ್ರದುರ್ಗ : ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರಪಪ್ಪಿ ಶನಿವಾರ ಭೀಮಸಮುದ್ರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬಿರುಸಿನ ಮತಯಾಚನೆ ನಡೆಸಿದ ವೇಳೆ ಬಿಜೆಪಿ. ಮತ್ತು ಜೆಡಿಎಸ್.ನ ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮತಯಾಚಿಸಿ ಮಾತನಾಡಿದ ಅಭ್ಯರ್ಥಿ ಕೆ.ಸಿ.ವೀರೇಂದ್ರಪಪ್ಪಿ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೌಭಾಗ್ಯ ಬಸವರಾಜನ್ ದಂಪತಿಗಳು ದಿಢೀರನೆ ಬಿಜೆಪಿ.ಗೆ ಸೇರ್ಪಡೆಯಾಗಿದ್ದರಿಂದ ಅಭಿಮಾನಿಗಳು ಬೇಸತ್ತು. ಕೆಲವರು ನನಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲೂ ನೀವುಗಳು ನನ್ನನ್ನು ಬೆಂಬಲಿಸಿದಿರಿ. ಆದರೂ ಸೋತೆ. ಈಗ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಈ ಬಾರಿ ಬಹುಮತಗಳ ಅಂತರದಿಂದ ಗೆಲ್ಲಿಸಿ ತಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸುವಂತೆ ಮತದಾರರಲ್ಲಿ ವಿನಂತಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಕಳೆದ ಮೂವತ್ತು ವರ್ಷಗಳಿಂದ ಹೇಗಿದೆಯೋ ಹಾಗೆ ಇದೆ. ಯಾವುದೇ ಅಭಿವೃದ್ದಿ ಕಂಡಿಲ್ಲ. ಅವೈಜ್ಞಾನಿಕ ಡಿವೈಡರ್, ರಸ್ತೆ ಮಧ್ಯೆ ದೀಪಗಳನ್ನು ಅಳವಡಿಸಿರುವುದನ್ನು ಬಿಟ್ಟರೆ ಕ್ಷೇತ್ರದ ಮತದಾರರಿಗೆ ಉಪಯೋಗವಾಗುವಂತ ಯಾವ ಕೆಲಸವೂ ಆಗಿಲ್ಲ. ನಮ್ಮ ಪಕ್ಷ ಪ್ರಣಾಳಿಕೆಯಲ್ಲಿ ಐದು ಭರವಸೆಗಳನ್ನು ನೀಡಿದೆ. ಪ್ರತಿ ಬಡ ಕುಟುಂಬಕ್ಕೆ ಹತ್ತು ಕೆ.ಜಿ.ಅಕ್ಕಿ, ಗೃಹಜ್ಯೋತಿ ಯೋಜನೆಯಡಿ ಇನ್ನೂರು ಯೂನಿಟ್ ಉಚಿತ ಕರೆಂಟ್, ಗ್ಯಾಸ್ ಮತ್ತಿತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಪ್ರತಿ ಮನೆಯ ಒಡತಿಗೆ ಮಾಸಿಕ ಎರಡು ಸಾವಿರ ರೂ.ಗಳನ್ನು ನೀಡಲಾಗುವುದು. ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಮೂರು ಸಾವಿರ ರೂ. ಹಾಗೂ ಡಿಪ್ಲಮೋ ಪಡೆದವರಿಗೆ ಒಂದುವರೆ ಸಾವಿರ ರೂ.ಗಳನ್ನು ಎರಡು ವರ್ಷಗಳ ಕಾಲ ಕೊಡಲಾಗುವುದು. ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರು ಸರ್ಕಾರಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು. ನುಡಿದಂತೆ ನಡೆಯುವ ಸರ್ಕಾರ ನಮ್ಮದು. ಅದಕ್ಕಾಗಿ ಈ ಬಾರಿ ಗೆದ್ದು ರಾಜ್ಯದಲ್ಲಿ ಸರ್ಕಾರ ರಚಿಸಿದ ಕೂಡಲೆ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
+ There are no comments
Add yours