ವರದಿ: ಮಹಂತೇಶ್ ಮೊಳಕಾಲ್ಮುರು
ಮೊಳಕಾಲ್ಮುರು:-ತಾಲೂಕಿನ ರಾಯಾಪುರ ಗ್ರಾಪಂ ವ್ಯಾಪ್ತಿಯ ಮ್ಯಾಸರಹಟ್ಟಿಯಲ್ಲಿ ಗುರುವಾರ ಸಾಯಂಕಾಲದಂದು ಮಧ್ಯ ಕರ್ನಾಟಕದ ಪ್ರಸಿದ್ಧವಾದ ಶ್ರೀಕೋಟೆಗುಡ್ಡ ಮಾರೇಶ್ವರಿ ಜಾತ್ರೆ ಪ್ರಯುಕ್ತ ಸಿಡಿ ಮಹೋತ್ಸವವು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ಅದ್ದೂರಿಯಾಗಿ ನಡೆಯಿತು.
ಜಿಲ್ಲೆಯಲ್ಲಿಯೇ ಈ ಜಾತ್ರೆಯು ಅತ್ಯಂತ ಪ್ರಸಿದ್ಧವಾಗಿದ್ದು ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ಸಿಡಿ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಹರಕೆ ಹೊತ್ತ ಭಕ್ತರು ದೇವಿಗೆ ಬಳೆಗಳ ಮಾಲೆ ಹಾಕಿ ಉರುಳು ಸೇವೆ ನಡೆಸಿ ಭಕ್ತ ಪ್ರದರ್ಶಿಸುತ್ತಾರೆ. ರಾಶಿಯಾಗಿದ್ದ ಬಳೆಯನ್ನು ಕಾಣಲು ಭಕ್ತರು ಮುಗಿಬಿದ್ದಿದ್ದರು.
ದೇವಸ್ಥಾನದ ಸಮಿತಿಯವರು ಸಿಡಿ ಕಂಬವನ್ನು ನಾನಾ ಹೂಗಳಿಂದ ಆಕರ್ಷಕವಾಗಿ ಸಿಂಗರಿಸಿ ಸಿಡಿ ತಿರುಗುವ ಮುನ್ನ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಸಿಡಿ ತಿರುಗುವ ವ್ಯಕ್ತಿಯು ಕಳೆದ 9 ದಿನಗಳಿಂದಲೂ ಉಪವಾಸ ವೃತ ಕೈಗೊಂಡಿದ್ದು ಈತನನ್ನು ಮೆರವಣಿಗೆ ಮೂಲಕ ಕರೆತರುವ ಭಕ್ತಾದಿಗಳು ಮಾರೇಶ್ವರಿ ದೇವಸ್ಥಾನಕ್ಕೆ ಮೂರು ಸುತ್ತು ಹಾಕಿ ಅನಂತರ ಸಿಡಿ ಕಂಬದ ಹತ್ತಿರ ಕರೆತರುತ್ತಾರೆ.ಸಿಡಿಯಾಡುವಾತ ಪ್ರತಿ ಸುತ್ತಿನಲ್ಲಿ ಕೆಳಗೆ ಬಂದು ದೇವಿಗೆ ನಮಸ್ಕರಿಸುತ್ತಾ ಮೂರು ಸುತ್ತುಗಳನ್ನು ಪೂರ್ಣಗೊಳಿಸುತ್ತಾನೆ.
ಸಿಡಿಯಾಟ ನೋಡುತ್ತಿದ್ದ ಭಕ್ತರು ಭಾವಪರಶವಾಗಿ ದೇವಿಗೆ ಜೈಕಾರ ಹಾಕುತ್ತ ಸಿಡಿ ಕಂಬಕ್ಕೆ ಬಾಳೆಹಣ್ಣು ಮಂಡಕ್ಕಿ ಸೂರು ಬೆಲ್ಲ ಎರಚಿ ಭಕ್ತಿ ಸಮರ್ಪಿಸುತ್ತಾರೆ.ಜಾತ್ರೆಗೆ ಜಿಲ್ಲೆಯ ಹಾಗೂ ತಾಲೂಕಿನ ನಾನಾ ಭಾಗ ಸೇರಿದಂತೆ ಬಳ್ಳಾರಿ ದಾವಣಗೆರೆ ತುಮಕೂರು ಜಿಲ್ಲೆಗಳಿಂದಲೂ ಹಾಗೂ ನೆರೆಯ ಆಂಧ್ರದಿಂದಲೂ ಸಾವಿರಾರು ಭಕ್ತಾದಿಗಳು ಆಗಮಿಸಿದ್ದರು.
[t4b-ticker]
+ There are no comments
Add yours